ಬದಿಯಡ್ಕ: ಯಕ್ಷಮಿತ್ರರು ಬೆಂಗಳೂರು ವತಿಯಿಂದ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಐದನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶುಕ್ರವಾರ ಹಿರಿಯ ಯಕ್ಷಗಾನ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರ ಗೌರವಾರ್ಪಣೆ ಕಾರ್ಯಕ್ರಮ ಎಡನೀರು ಮಠದ ಭಾರತೀ ಕಲಾಸದನದಲ್ಲಿ ನಡೆಯಿತು.
ಈ ವೇಳೆ ಆಶೀರ್ವಚನ ನೀಡಿದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ನಮ್ಮ ಸನಾತನ ಧರ್ಮದಲ್ಲಿ ನಾವು ಆಚರಿಸುವ ಹಬ್ಬ ಹಾಗೂ ಕಲೆಗಳು ಎಲ್ಲರೀತಿಯಲ್ಲೂ ಸಮಾಜಕ್ಕೆ ಶಿಕ್ಷಣವನ್ನು ನೀಡುತ್ತವೆ. ಪ್ರತಿ ಹಬ್ಬದಲ್ಲೂ ಶಿಕ್ಷಣ ಸಂದೇಶ, ಯಾವುದೇ ಕಲಾ ಪ್ರದರ್ಶನದಲ್ಲಿ ಸಂದೇಶ ಸಿಗುತ್ತದೆ, ಅಂತಹ ಶಿಕ್ಷಕರ ದಿನಾಚರಣೆಯಂದು ಓಣಂ ಹಬ್ಬದಂದು, ಹಿರಿಯ ಯಕ್ಷಗಾನ ಕಲಾವಿದರನ್ನು ಗೌರವಿಸುವ ಯಕ್ಷಮಿತ್ರರು ಬೆಂಗಳೂರು ಅವರ ಹೆಜ್ಜೆ ಅನುಸರಣೀಯವಾದದ್ದು, ಅದರಲ್ಲೂತಾಳಮದ್ದಳೆ ಕ್ಷೇತ್ರದ ಅಗ್ರಗಣ್ಯ ಅರ್ಥಧಾರಿಗಳಲ್ಲೊಬ್ಬರಾದ ಸುಣ್ಣಂಬಳ ಅವರನ್ನು ಗೌರವಿಸುವುದು ಶ್ಲಾಘನೀಯ ಎಂದರು.
ಪುರಾಣಗಳ ಬಗ್ಗೆ ತಿಳುವಳಿಕೆ ನೀಡುತ್ತಾ ಬಂದಿದೆ, ಭಗವದ್ಗೀತೆ ಅಳವಡಿಸುವುದಕ್ಕೆ ನಮ್ಮದೇ ಧರ್ಮೀಯರು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಕಾಣುತ್ತಿದ್ದೇವೆ. ಹಿಂದಿನಿಂದಲೂ ಪಠ್ಯದಲ್ಲಿ ಪುರಾಣಗಳನ್ನು ಅಳವಡಿಸಿದ್ದನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದರು, ಅವರು ಉತ್ತಮ ಪ್ರಜೆಗಳಾಗುತ್ತಿದ್ದರು, ನಮ್ಮ ಹೆಮ್ಮೆಯ ಕಲೆ ಯಕ್ಷಗಾನ ಬುದ್ಧಿ ಪ್ರಚೋದಿಸುವ ಕೆಲಸ ಮಾಡುತ್ತಿದೆ, ಪೆÇೀಷಕರೂ ತಮ್ಮ ಮಕ್ಕಳನ್ನು ಆ ಕಲೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದರು.
ಮಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತೀಯ ಭಾಷೆ, ಕಲೆ ಸಂಸ್ಕøತಿಗಳು ಮಹತ್ತರ ತಿರುವಿನಲ್ಲಿ ನಿಂತಿರುವಾಗ ಅವುಗಳನ್ನು ಪುನಃ ಪ್ರತಿಷ್ಠಾಪಿಸಲು ಆಸಕ್ತ ಯುವ ಜನರು ಮುಂದೆ ಬರಬೇಕು, ಇಡೀ ರಾತ್ರಿಯ ಯಕ್ಷಗಾನ ಸಮಯಮಿತಿಗೊಳಪಟ್ಟಿದೆ, ಭವಿಷ್ಯ ಹೇಗಿದೆಯೋ ತಿಳಿಯದು, ಹೀಗಿರುವಾಗ ಹೊಸ ತಲೆಮಾರಿಗೆ ಅಭಿರುಚಿ ಮೂಡಿಸಬೇಕಾಗಿದೆ. ಹೊಸ ಮಾಧ್ಯಮಗಳ ಮೂಲಕ ಅದು ತಲಪಬೇಕಿದೆ. ಅಂತಹ ಕೆಲಸವನ್ನು ಯಕ್ಷಮಿತ್ರರು ಬೆಂಗಳೂರು ಮಾಡುತ್ತಾ ಬಂದಿದೆ ಎಂದರು.
ಯಕ್ಷಗಾನ ಕಲಾವಿದ ಹರೀಶ್ ಬಳಂತಿ ಮೊಗರು ನಿರೂಪಿಸಿದರು. ಯಕ್ಷಮಿತ್ರರು ಬೆಂಗಳೂರು ಸಂಚಾಲಕ ಶ್ಯಾಮಸೂರ್ಯ ಮುಳಿಗದ್ದೆ ಸ್ವಾಗತಿಸಿ ಪ್ರಸ್ತಾವಿಸಿದರು. ಶ್ವೇತಪೂರ್ಣಿಮ ಸಹಕರಿಸಿದರು.
ಬಳಿಕ ಕಾವ್ಯಶ್ರೀ ಅಜೇರು, ಚಿನ್ಮಯ ಭಟ್ ಕಲ್ಲಡ್ಕ, ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಚೈತನ್ಯಕೃಷ್ಣ ಪದ್ಯಾಣ, ಹಿಮ್ಮೇಳ ಹಾಗೂ ಸುಣ್ಣಂಬಳ ವಿಶ್ವೇಶ್ವರ ಭಟ್, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬಳಂತಿಮೊಗರು, ರವಿರಾಜ ಪನೆಯಾಲ ಅವರು ಮುಮ್ಮೇಳದಲ್ಲಿ ಭಾಗವಹಿಸಿದ ಯಕ್ಷಗಾನ ತಾಳಮದ್ದಳೆ ಮಹಾಪತನ ನಡೆಯಿತು.





