ಮಂಜೇಶ್ವರ: ಕಣ್ವತೀರ್ಥ ಪರಿಸರದಲ್ಲಿ ಹಲವು ವರ್ಷಗಳಿಂದ ಪರಿಸರ ಮಾಲಿನ್ಯ ಚಟುವಟಿಕೆಗಳಿಗೆ ಕಾರಣವಾಗಿರುವ ಯುನೈಟೆಡ್ ಸೀಫುಡ್ ಫ್ಯಾಕ್ಟರಿ ಎಂಬ ಮೀನು ಸಂಸ್ಕರಣಾ ಕೇಂದ್ರದ ವಿರುದ್ಧ ಕಣ್ವತೀರ್ಥ ನಾಗರೀಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಯಿತು.
ಕಣ್ವತೀರ್ಥ ಗೇಟ್ ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಮಂಜೇಶ್ವರ ಗ್ರಾಮ ಪಂಚಾಯತು ಮುಂಭಾಗದಲ್ಲಿ ಪೆÇಲೀಸರು ತಡೆದರು.
ಬಳಿಕ ಮಂಜೇಶ್ವರ ಗ್ರಾಮಪಂಚಾಯತಿ ಮುಂಭಾಗದಲ್ಲಿ ನಿವೃತ ಸೇನಾಧಿಕಾರಿ ವಿಜಯ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಮಧುಸೂದನ್ ಆಚಾರ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಈ ಫ್ಯಾಕ್ಟರಿಯಿಂದ ಪರಿಸರದ ನೀರು ಗಾಳಿ ಕಲುಷಿತವಾಗುತ್ತಿದೆ. ಈ ತ್ಯಾಜಯುಕ್ತ ಮಲೀನ ನೀರು ಅಂತರ್ಗಾಮಿಯಾಗಿ ಇಡೀ ಕಣ್ವತೀರ್ಥದ ಜನರ ನೆಮ್ಮದಿಯ ಬದುಕನ್ನು ನಾಶಮಾಡುತ್ತಿದೆ. ಈ ಬಗ್ಗೆ ಕಳೆದ 7 ವರ್ಷಗಳಲ್ಲಿ ಹಲವು ಪ್ರಯತ್ನ ಮಾಡಿದರೂ ಫಲ ದೊರೆಯದಿರುವುದಕ್ಕೆ ಪಂಚಾಯತ್ ನೇರ ಹೊಣೆಯಾಗಿದ್ದು ಈ ಬಗ್ಗೆ ಪಂಚಾಯತ್ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲು ಪ್ರತಿಭಟನೆಯ ಹೊರತು ಬೇರೆ ದಾರಿ ಇಲ್ಲ ಎಂಬುದಾಗಿ ಅಭಿಪ್ರಾಯಪಟ್ಟರು.
ಜಯಂತ ಕುಮಾರ್, ಪವನ್ ಕುಮಾರ್, ಪ್ರವೀಣ್ ಕುಮಾರ್, ಸುಕುಮಾರ್ ಮಜಲ್, ಡಾ. ಚಂದ್ರಹಾಸ ಕಣ್ವತೀರ್ಥ ನೇತೃತ್ವ ನೀಡಿದರು. ಪ್ರತಿಭಟನೆಯಲ್ಲಿ ಸಮಿತಿ ಸದಸ್ಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.





