ಅಹಮದಾಬಾದ್: ಬ್ಯಾಂಕ್ಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಬಳಿ ವಾರಸುದಾರರಿಲ್ಲದ ₹1.84 ಲಕ್ಷ ಕೋಟಿ ಮೊತ್ತದಷ್ಟು ಆಸ್ತಿ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶನಿವಾರ ಇಲ್ಲಿ 'ನಿಮ್ಮ ಹಣ, ನಿಮ್ಮ ಹಕ್ಕು' ತ್ರೈಮಾಸಿಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 'ಬ್ಯಾಂಕ್ಗಳಲ್ಲಿ ಠೇವಣಿ, ವಿಮೆ, ಪಿಎಫ್ ಮತ್ತು ಷೇರಿನ ರೂಪದಲ್ಲಿ ಅಪಾರ ಮೊತ್ತದ ಆಸ್ತಿಯ ವಾರಸುದಾರರಿಲ್ಲದೆ ಕೊಳೆಯುತ್ತಿದೆ.
ಈ ಹಣವನ್ನು ಅದರ ಸರಿಯಾದ ಮಾಲೀಕರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಈ ಅಭಿಯಾನದಡಿ ಕೈಗೊಳ್ಳಬೇಕು' ಎಂದರು.
'ಈ ಮೊತ್ತಕ್ಕೆ ಸರ್ಕಾರವೇ ಉಸ್ತುವಾರಿ. ಈ ಹಣವು ಸಂಪೂರ್ಣ ಸುರಕ್ಷಿತವಾಗಿದೆ. ಅರ್ಹ ಮಾಲೀಕರು ದಾಖಲೆಗಳೊಂದಿಗೆ ಬಂದರೆ ಬ್ಯಾಂಕ್, ಸೆಬಿ ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳ ಮೂಲಕ ಈ ಹಣವನ್ನು ವಾಪಸ್ ಪಡೆಯಬಹುದು. ಆರ್ಬಿಐ ಕೂಡ ಇಂತಹ ವಾರಸುದಾರರಿಲ್ಲದ ಖಾತೆ, ಠೇವಣಿಗಳನ್ನುನಿರ್ವಹಿಸಲು 'ಯುಡಿಜಿಎಎಂ' ಪೋರ್ಟಲ್ ಅಭಿವೃದ್ಧಿಪಡಿಸಿದೆ' ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.




