ಪ್ರಯಾಗರಾಜ್: ಪತ್ರಕರ್ತ ಲಕ್ಷ್ಮಿ ನಾರಾಯಣ ಸಿಂಗ್ ಅಲಿಯಾಸ್ ಪಪ್ಪು ಅವರ ಹತ್ಯೆ ಪ್ರಕರಣದ ಆರೋಪಿಯನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
54 ವರ್ಷದ ಸಿಂಗ್, ಹೈಕೋರ್ಟ್ ಬಾರ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಅಶೋಕ್ ಸಿಂಗ್ ಅವರ ಸಂಬಂಧಿ.
ಅವರನ್ನು ಪ್ರಯಾಗರಾಜ್ನ ಹರ್ಷ್ ಹೋಟೆಲ್ ಸಮೀಪ ಗುರುವಾರ ಸಂಜೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಸಿಂಗ್ ಅವರನ್ನು ಕೂಡಲೇ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಪ್ರಮುಖ ಆರೋಪಿ ವಿಶಾಲ್ ಎಂಬಾತ ಇತರ ಕೆಲವರೊಂದಿಗೆ ಸೇರಿ ದಾಳಿ ಮಾಡಿದ್ದ ಎಂಬುದು ಘಟನಾ ಸ್ಥಳದಲ್ಲಿ ದೊರೆತ ಸಾಕ್ಷ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿಂದ ತಿಳಿದುಬಂದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಪಾಲ್ ಶರ್ಮಾ ಹೇಳಿದ್ದಾರೆ.
ವಿಶಾಲ್, ಪತ್ರಕರ್ತನ ಮೇಲೆ ದಾಳಿ ನಡೆಸಲು ಬಳಸಿದ ಚಾಕುವನ್ನು ಖುಲ್ದಾಬಾದ್ನ ಮಛಿಲ್ ಬಜಾರ್ನಲ್ಲಿ ಖರೀದಿಸಿದ್ದ ಎಂದು ಮಾಹಿತಿ ನೀಡಿರುವ ಶರ್ಮಾ, ಘಟನಾ ಸ್ಥಳದ ಸಮೀಪ ಗುರುವಾರ ತಡರಾತ್ರಿ ನಡೆಸಿದ ಎನ್ಕೌಂಟರ್ ವೇಳೆ ಆರೋಪಿಯ ಕಾಲಿಗೆ ಮೂರು ಗುಂಡುಗಳು ತಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನಿಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಇತರ ಆರೋಪಿಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದೂ ಹೇಳಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿ ಹಾಗೂ ಮೃತ ವ್ಯಕ್ತಿಯ ನಡುವೆ ಕೆಲವು ದಿನಗಳ ಹಿಂದೆ ಜಗಳ ನಡೆದಿತ್ತು. ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.




