ಬದಿಯಡ್ಕ:ಮನೆಮನೆಗಳಿಂದ ತ್ಯಾಜ್ಯ ವಿಕಲೇವಾರಿಗೆ ಸಂಗ್ರಹಿಸುವ ಹಸಿರು ಕ್ರಿಯಾಸೇನೆ ಉದ್ಯೋಗಿಗಳು ಕೃತ್ತಿಮ ಲೆಕ್ಕಾಚಾರ ನೀಡಿ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಪ್ರಯತ್ನಿಸಿದ್ದಾರೆಂಬ ಆರೋಪದಲ್ಲಿ ಇಬ್ಬರು ಹಸಿರು ಕ್ರಿಯಾಸೇನೆ ಉದ್ಯೋಗಿಗಳನ್ನು ಅಮಾನತುಗೈದು ವಿಜಿಲೆನ್ಸ್ ತನಿಖೆ ನಡೆಸಲು ಬದಿಯಡ್ಕ ಪಂಚಾಯತಿ ಆಡಳಿತ ಸಮಿತಿ ಸಭೆ ನಿರ್ಧರಿಸಿದೆ.
ಪಂಚಾಯತಿ ವ್ಯಾಪ್ತಿಯ ಹದಿನೇಳನೇ ವಾರ್ಡಿನ ಹಸಿರು ಕ್ರಿಯಾಸೇನೆಯ ಕಾರ್ಯಕರ್ತೆಯಾದ ಏಣಿಯರ್ಪು ಲೈಫ್ ವಿಲ್ಲದ ಸೀನತ್ ಏಣಿಯರ್ಪು ಹಾಗೂ ಶಾರದ ಎಂಬವರನ್ನು ತನಿಖೆಗೆ ವಿಧೇಯಗೊಳಿಸಿ ಕೆಲಸದಿಂದ ಅಮಾನತುಗೈಯಲು ಹಾಗೂ ವಿಜಿಲೆನ್ಸ್ ಸಮಗ್ರ ತನಿಖೆಗೊಳಪಡಿಸಲು ಮಂಗಳವಾರ ಸೇರಿದ ಆಡಳಿತ ಸಮಿತಿಯ ಸಭೆ ನಿರ್ಧರಿಸಿದೆ. ಪಂಚಾಯತಿಯ 19 ಸದಸ್ಯರಲ್ಲಿ 17 ಜನಪ್ರತಿನಿಧಿಗಳ ಬೆಂಬಲದೊಂದಿಗೆ ಸಭೆ ಈ ನಿರ್ಣಯ ಕೈಗೊಂಡಿದೆ.
ವಾರ್ಡ್ ವ್ಯಾಪ್ತಿಯಲ್ಲಿ ಹಸಿರು ಕ್ರಿಯಾಸೇನೆ ಕಾರ್ಯಕರ್ತರು ಬಳಕೆದಾರರ ಮೊತ್ತದ ರೂಪದಲ್ಲಿ ಸಂಗ್ರಹಿಸುವ ಮೊತ್ತವನ್ನು ಬ್ಯಾಂಕಿನಲ್ಲಿ ಪಾವತಿಸಬೇಕಾಗಿರುವುದು ನಿಯಮವಾಗಿದೆ. ಇವರು ಹೀಗೆ ಸಂಗ್ರಹಿಸಿದ ಮೊತ್ತವನ್ನು ಪೂರ್ಣ ಪಾವತಿಸದೆ ಪಂಚಾಯತಿ ಕಛೇರಿಯಲ್ಲಿ ನೀಡುವ ರಶೀದಿಯಲ್ಲಿ ಮಾತ್ರ ಕೃತಕ ಲೆಕ್ಕಚಾರ ನೀಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನಲೆಯಲ್ಲಿ ಹಲವು ಪಕ್ಷಗಳು ಸಂಘಟನಾತ್ಮಕವಾಗಿ ಔಪಚಾರಿಕ ಖಂಡನೆ ವ್ಯಕ್ತಪಡಿಸಿ ಆಡಳಿತ ಸಮಿತಿಯು ಇದನ್ನು ಪರಿಣಾಮಕಾರಿಯಾಗಿ ಗಣನೆಗೆ ತೆಗೆದುಕೊಂಡು ತನಿಖೆ ನಡೆಸಲು ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ಹಸಿರು ಕ್ರಿಯಾಸೇನೆ ಪರಿಶೋಧಕ ವಿಭಾಗ ಎಲ್ಲಾ ವಾರ್ಡ್ಗಳಲ್ಲಿಯೂ ಲೆಕ್ಕಚಾರವನ್ನು ಪರಿಶೀಲನೆ ನಡೆಸಿದ ಬಳಿಕವಷ್ಟೆ ಕೃತಕ ಲೆಕ್ಕಾಚಾರದ ಮೊತ್ತವನ್ನು ಪತ್ತೆಹಚ್ಚಲು ಸಾಧ್ಯವಾಗಬಹುದು ಎಂದು ಪಂಚಾಯತಿ ಅಧ್ಯಕ್ಷೆ ಬಿ.ಶಾಂತ ಸ್ಪಷ್ಟಪಡಿಸಿದ್ದಾರೆ.
ಹಸಿರು ಕ್ರಿಯಾಸೇನೆ ಕಾರ್ಯಕರ್ತೆಯರು ನಡೆಸಿದ ವಂಚನೆ ಖಂಡಿಸಿ ಬುಧವಾರ ರಾತ್ರಿ ಏಣಿಯರ್ಪಲ್ಲಿ ಸ್ಥಳೀಯ ಜನಕೀಯ ಸಮಿತಿ ದೊಂದಿ ಮೆರವಣಿಗೆ ನಡೆಸಿದೆ. ಆರೋಪಕ್ಕೊಳಗಾದ ಕಾರ್ಯಕರ್ತೆಯರ ಮೇಲೆ ಸೂಕ್ತಕ್ರಮ ಜರಗಿಸುವಂತೆ ಒತ್ತಾಯಿಸಲಾಗಿದೆ.
ಜನಕೀಯ ಸಮಿತಿ ನಡೆಸಿದ ಪ್ರತಿಭಟನೆಗೆ ಅಶ್ವಿನಿ ಕೆ.ಎಂ, ಸ್ವಪ್ನಾ, ರಜನಿ ಸಂದೀಪ್, ಪ್ರೇಮ, ಉಮೇಶ್ ಏಣಿಯರ್ಪು, ಪುನೀತ್, ಬಾಲಗೋಪಾಲ, ಸತೀಶ್ ಏಣಿಯರ್ಪು, ಅಜಿತ್ ಮೊದಲಾದವರು ನೇತೃತ್ವ ನೀಡಿದರು.





