ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಗಡೋಲ್ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಪ್ಯಾರಾ ಕಮಾಂಡೊಗಳ ಮೃತದೇಹ ಪತ್ತೆಯಾಗಿದೆ. ಇದರೊಂದಿಗೆ ಕಳೆದ 5 ದಿನಗಳಿಂದ ನಡೆಯುತ್ತಿದ್ದ ಶೋಧ ಕಾರ್ಯಾಚರಣೆ ಶನಿವಾರ ಮುಕ್ತಾಯಗೊಂಡಿದೆ.
ಕಿಶ್ತ್ವಾರ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ಆಧರಿಸಿ ಅಕ್ಟೋಬರ್ 6 ಮತ್ತು 7ರ ಮಧ್ಯರಾತ್ರಿಯಲ್ಲಿ ಕಾರ್ಯಾಚರಣೆ ನಡೆದಿತ್ತು.
ಈ ವೇಳೆ ತೀವ್ರ ಹಿಮಪಾತವಾದ ಕಾರಣ ಕಾರ್ಯಾಚರಣೆಯ ಭಾಗವಾಗಿದ್ದ ಲ್ಯಾನ್ಸ್ ಹವಾಲ್ದಾರ್ ಪಲಾಶ್ ಘೋಷ್ ಹಾಗೂ ಲ್ಯಾನ್ಸ್ ನಾಯಕ್ ಸುಜಯ್ ಘೋಷ್ ಅವರು ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದ್ದರು.
ನಾಪತ್ತೆಯಾದವರ ಹುಡುಕಾಟಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಲೇ ಇತ್ತು. ಆದರೆ, ಶುಕ್ರವಾರ ಒಬ್ಬ ಯೋಧನ ಮೃತದೇಹ ಪತ್ತೆಯಾಗಿದ್ದು, ಶನಿವಾರ ಮತ್ತೊಬ್ಬ ಯೋಧನ ಮೃತದೇಹ ಸಿಕ್ಕಿದೆ. ಹೀಗಾಗಿ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಹುತಾತ್ಮರಾದ ಯೋಧರಿಗೆ ಶ್ರೀನಗರದ ಚಿನಾರ್ ಕಾರ್ಪ್ಸ್ ತಂಡವು ಗೌರವನಮನ ಸಲ್ಲಿಸಿದೆ.




