ಕಾಸರಗೋಡು: ಬೇಕಲ್ ಗೋಕುಲಂ ಗೋಶಾಲೆಯು ಈ ವರ್ಷದ ಪರಂಪರಾ ಪ್ರಶಸ್ತಿಗಳನ್ನು ಘೋಷಿಸಿದೆ.
ಪ್ರಸಿದ್ಧ ಸಂಗೀತಜ್ಞ ಮತ್ತು ವಯೋಲಿನ್, ಮೃದಂಗ ವಿದ್ವಾಂಸ ಟಿ.ವಿ. ಗೋಪಾಲಕೃಷ್ಣನ್ (ಟಿ.ವಿ.ಜಿ) ಅವರಿಗೆ ಪರಂಪರಾ ವಿಭೂಷಣ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು 61,000 ನಗದು ಬಹುಮಾನ ಮತ್ತು ತಾಮ್ರ ಫಲಕವನ್ನು ಒಳಗೊಂಡಿದೆ. ಪರಂಪರಾ ಶ್ರೀ ಪ್ರಶಸ್ತಿಯನ್ನು ಪ್ರಸಿದ್ಧ ಡ್ರಮ್ ಮಾಂತ್ರಿಕ ಶಿವಮಣಿ ಅವರಿಗೆ ನೀಡಲಾಗುತ್ತದೆ. ಪ್ರಶಸ್ತಿಯು 51,000 ನಗದು ಮತ್ತು ತಾಮ್ರ ಫಲಕವನ್ನು ಒಳಗೊಂಡಿದೆ. ಈ ವರ್ಷದ ಗುರುರತ್ನ ಪ್ರಶಸ್ತಿ ಕೇರಳದ ಹೆಮ್ಮೆ, ವೀಣೆ ವಿದ್ವಾಂಸ ತ್ರಿಶೂರ್ ಅನಂತ ಪದ್ಮನಾಭನ್ ಅವರಿಗೆ ದೊರಕಿದೆ. ಪ್ರಶಸ್ತಿಯೊಂದಿಗೆ 30,000 ನಗದು ಮತ್ತು ತಾಮ್ರಪತ್ರ ನೀಡಲಾಗುತ್ತದೆ.
ಯುವ ಪ್ರತಿಭಾ ಪ್ರಶಸ್ತಿ ಪ್ರಸಿದ್ಧ ಯುವ ಸಂಗೀತಜ್ಞೆ ಮತ್ತು ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್ ಅವರಿಗೆ ನೀಡಲಾಗುತ್ತದೆ. ಪ್ರಶಸ್ತಿಯಲ್ಲಿ ರೂ.25,000 ನಗದು ಮತ್ತು ತಾಮ್ರಪತ್ರವಿದೆ. ಮ್ಯಾಂಡೋಲಿನ್ ವಾದನದಲ್ಲಿ ಅದ್ಭುತ ಕೈಚಳಕವನ್ನು ತೋರಿಸಿರುವ ಸಿಂಗಾಪುರದ ರಾಘವಕೃಷ್ಣ ಅವರಿಗೆ ಬಾಲ ಪ್ರತಿಭಾ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ರೂ.20,000 ನಗದು ಮತ್ತು ತಾಮ್ರ ಫಲಕ ಒಳಗೊಂಡಿದೆ. ಎಲ್ಲ ಪ್ರಶಸ್ತಿಗಳನ್ನು ನವೆಂಬರ್ 1 ರಂದು, ದೀಪಾವಳಿ ಸಂಗೀತೋತ್ಸವದ ಸಮಾರೋಪ ಸಮಾರಂಭದಂದು ಪ್ರದಾನ ಮಾಡಲಾಗುವುದು ಎಂದು ಪೆರಿಯ ಗೋಕುಲಂ ಗೋಶಾಲೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



