ಮಂಜೇಶ್ವರ : ಮೂಡಂಬೈಲು ಸರ್ಕಾರಿ ಪ್ರೌಢ ಶಾಲಾ ಶತಮಾನೋತ್ಸವದ ಸವಿ ನೆನಪಿಗಾಗಿ ನಿರ್ಮಿಸಲಿರುವ ರಂಗಮಂದಿರದ ಶಂಕು ಸ್ಥಾಪನೆ ಕಾರ್ಯಕ್ರಮ ಶಾಲಾ ವಠಾರದಲ್ಲಿ ಭಾನುವಾರ ನಡೆಯಿತು. ರಂಗಮಂದಿರದ ಶಂಕು ಸ್ಥಾಪನೆಯನ್ನು ಉದ್ಯಮಿ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ನಡೆಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಊರಿನ ಆರಾಧನಕೇಂದ್ರಗಳು ಹೇಗೆ ಇವೆಯೋ ಅದಕ್ಕಿಂತಲೂ ಭಿನ್ನವಾಗಿ ಎಲ್ಲಾ ಜಾತಿ ಮತ ಧರ್ಮಗಳಿಗೂ ವಿದ್ಯಾ ಕೇಂದ್ರವೂ ಮುಖ್ಯವಾಗಿರುತ್ತದೆ. ಇಂತಹ ವಿದ್ಯಾಲಯಗಳಲ್ಲಿ ಸ್ಥಾಪಿತವಾಗುವ ರಂಗ ಮಂದಿರಗಳು ಭವಿಷ್ಯದ ಪ್ರತಿಭೆಗಳಿಗೆ ಪುಟ್ಟ ಹೆಜ್ಜೆವೂರಲು ಇರುವ ಪವಿತ್ರ ಸಾನಿಧ್ಯವಾಗಿದೆ. ಆದ್ದರಿಂದಲೇ ರಂಗ ಮಂದಿರವೊಂದರ ನಿರ್ಮಾಣಕ್ಕೆ ಪ್ರಾಶಸ್ತ್ಯ ಕಲ್ಪಿಸುವುದು ಪ್ರಾಮುಖ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಅಕ್ಷರ ಸಂತ ಹರೇಕಳ ಹಾಜಬ್ಬ,, ಚಲನಚಿತ್ರ ನಟ ಸು ಫ್ರಮ್ ಸೋ ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್, ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ, ವಾರ್ಡ್ ಸದಸ್ಯ ಜಯರಾಮ ಬಲ್ಲಂಗುಡೆಲು, ಮಂಜೇಶ್ವರ ಎಇಒ ಜಾರ್ಜ್ ಕ್ರಾಸ್ತಾ, ಕಂಚಿಲ ಮಹಮ್ಮದ್, ನಿವೃತ್ತ ಅಧ್ಯಾಪಕ ಬಾಲಕೃಷ್ಣ ಭಂಡಾರಿ ದಡ್ಡಂಗಡಿ, ಪಿ.ಟಿ.ಎ ಅಧ್ಯಕ್ಷ ಅಬ್ದುಲ್ ಕುಂಞÂ್ಞ ಪಜಿಂಗಾರ್, ಎಂ.ಪಿ.ಟಿ.ಎ ಅಧ್ಯಕ್ಷೆ ಅನುಪಮ ನಾಯ್ಕ್, ಓಂ.ಎಸ್.ಎ ಅಧ್ಯಕ್ಷ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಬಶೀರ್ ಮೂಡಂಬೈಲು, ಇಬ್ರಾಹಿಂ ಮಾಸ್ತರ್, ರಮಾ ಭಾಯಿ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಬೆಂಬಲ ಸಮಿತಿಯ ಅಧ್ಯಕ್ಷ ಶಿವರಾಮ ಪದಕಣ್ಣಯರವರು ವಹಿಸಿ ಶಾಲಾ ಶತಮಾನೋತ್ಸವ ಸಂಭ್ರಮಕ್ಕೆ ಭಾಗಿಯಾಗುತ್ತಿರುವುದು ನಮ್ಮೆಲ್ಲರ ಪುಣ್ಯ ಎಂದರು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ವಕೀಲ ದಾಮೋದರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ದಯಾವತಿ ಸಾಲಿಯಾನ್ ಸ್ವಾಗತಿಸಿ, ಪ್ರಚಾರ ಸಮಿತಿ ಸಂಚಾಲಕ ಜಗದೀಶ್ ಮೂಡಂಬೈಲು ವಂದಿಸಿದರು. ಅರವಿಂದಾಕ್ಷ ಭಂಡಾರಿ ನಿರೂಪಿಸಿದರು.




.jpg)
.jpg)
