ಕಾಸರಗೋಡು: ಕಾಸರಗೋಡು ನಗರದಲ್ಲಿ ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು, ಕೇರಳ ಘನತ್ಯಾಜ್ಯ ನಿರ್ವಹಣಾ ಯೋಜನೆಯ ಆಶ್ರಯದಲ್ಲಿ 'ಗಾಂಗುಳ್ಳ ಬಜಾರ್, ಚೇಲುಳ್ಳ ಬಜಾರ್'(ಅಂದದ ಬಜಾರ್-ಚೆಂದದ ಬಜಾರ್) ಎಂಬ ಘೋಷಣೆಯೊಂದಿಗೆ ಕಾಸರಗೋಡು ನಗರಸಭೆಯಲ್ಲಿ ನಿನ್ನೆ ವಾಕಥಾನ್ ಆಯೋಜಿಸಲಾಗಿತ್ತು.
ನಗರಸಭೆ ಅಧ್ಯಕ್ಷೆ ಅಬ್ಬಾಸ್ ಬೇಗಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಈ ವರ್ಷದ ವಿಶ್ವ ಪರಿಸರ ದಿನದ ಸಂದೇಶವಾಗಿರುವ 'ಪ್ಲಾಸ್ಟಿಕ್ ಮಾಲಿನ್ಯವನ್ನು ಪರಾಭವಗೊಳಿಸಿ' ಎಂಬ ಸಂದೇಶವಿರುವ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷರು ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಕಾಸರಗೋಡು ಸರ್ಕಾರಿ ಕಾಲೇಜಿನ ಎನ್.ಎಸ್.ಎಸ್ ಸದಸ್ಯರು ಪ್ರಸ್ತುತಪಡಿಸಿದ ಫ್ಲಾಶ್ ಮಾಬ್ ಗಮನಾರ್ಹವಾಗಿತ್ತು. ಕಾಸರಗೋಡು ಜಿ.ಎಚ್.ಎಸ್.ಎಸ್., ತಳಂಗೆರೆ ಜಿ.ವಿ.ಎಚ್.ಎಸ್.ಎಸ್. ಎಸ್.ಪಿ.ಸಿ ಸದಸ್ಯರು, ಸಾರ್ವಜನಿಕ ಪ್ರತಿನಿಧಿಗಳು, ಹಸಿರು ಕ್ರಿಯಾಸೇನೆ, ವ್ಯಾಪಾರಿಗಳು ಮತ್ತು ವಿವಿಧ ಕ್ಷೇತ್ರಗಳ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಜಹೀರ್ ಆಸಿಫ್, ಕೆ.ಎಸ್. ಡಬ್ಲ್ಯೂಎಂಪಿ ಜಿಲ್ಲಾ ಉಪ ಸಂಯೋಜಕ ಮಿಥುನ್ ಕೃಷ್ಣನ್, ಜಿಲ್ಲಾ ಸಾಮಾಜಿಕ ತಜ್ಞ ಡಾ. ಕೆ.ವಿ. ಸೂರಜ್, ಮೇಲ್ವಿಚಾರಣಾ ತಜ್ಞ ಸಿ.ಎಂ. ಬೈಜು, ಪ್ಯಾಕೇಜ್-ಡಿ ತಂಡದ ನಾಯಕ ಮಹೇಶ್ ರೆಡ್ಡಿ ಕೊಡೂರು, ಸಂವಹನ ಸಲಹೆಗಾರ ಟಿ.ಎಸ್. ಪರಶ್ಶಿನ್ ರಾಜ್, ಕ್ಲೀನ್ ಸಿಟಿ ವ್ಯವಸ್ಥಾಪಕ ಎ.ವಿ. ಮಧುಸೂಧನನ್, ಎಸ್.ಡಬ್ಲ್ಯೂ.ಎಂ. ಎಂಜಿನಿಯರ್ ಕೆ.ಪಿ. ನೀತುರಾಮ್ ಮಾತನಾಡಿದರು. ನಗರಸಭೆ ಕಟ್ಟಡದ ಮುಂದೆ ಪ್ರಾರಂಭವಾದ ವಾಕಥಾನ್ ನಗರದ ಸುತ್ತಲೂ ಸಂಚರಿಸಿ ಕೊನೆಗೊಂಡಿತು.


