ಮಂಜೇಶ್ವರ: ಮಾನವ ಮತ್ತು ದಾನವನ ನಡುವಿನ ವ್ಯತ್ಯಾಸವಿರುವುದು ಕರುಣೆ ಎಂಬ ಭಾವ ಸ್ಪುರತೆಯಲ್ಲಾಗಿದೆ. ಮನುಷ್ಯ ಜನ್ಮವಾದರೂ ಆರ್ತರ, ನಮ್ಮೊಡನಾಡಿಗಳ ಬಗೆಗೆ ಪ್ರೇಮ-ಕಾರಣ್ಯಗಳಿಲ್ಲದಿದ್ದರೆ ಅಂತಹ ಜೀವನ ಅಧಃಪತನದ ಪಾತಾಳಕ್ಕೆ ತಳ್ಳಲ್ಪಡುತ್ತದೆ. ಕರುಣೆಯಿಂದ ಮಾತ್ರ ಮನುಷ್ಯ ದೈವತ್ವಕ್ಕೇರಬಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಶ್ರೀಗಳು ಆಶೀರ್ವಚನ ನುಡಿಗಳಲ್ಲಿ ತಿಳಿಸಿದರು.
ದೈಗೋಳಿ ಶ್ರೀ ಸಾಯಿನಿಕೇತನ ಸೇವಾಶ್ರಮದ ಆವರಣದಲ್ಲಿ ಭಾನುವಾರ ಸಂಜೆ ನಡೆದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಾಬ್ದಿ ಆಚರಣೆ ಹಾಗೂ ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ಸೌಲಭ್ಯಗಳುಳ್ಳ ನವಚೇತನ ಕೇರ್ ಸೆಂಟರ್ನ ಲೋಕಾರ್ಪಣೆಗೈದು ಬಳಿಕ ನಡೆದ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದಾನವ, ಮಾನವ, ಮಾಧವ ಎಂಬುದು ಮನುಷ್ಯರೊಳಗಿನ ಹಂತಗಳಾಗಿದ್ದು, ಸಾಮಾಜಿಕ ಬದ್ದತೆಯ ಸೇವೆಯ ಮೂಲಕ ಮಾಧವತ್ವ ಪ್ರಾಪ್ತಿಯಾಗುತ್ತದೆ. ಸ್ವರ್ಣ ಸದೃಶ ಸಾಯಿನಿಕೇತನ ಸೇವಾಶ್ರಮದೊಂದಿಗೆ ಮಾಣಿಕ್ಯದೋಪಾದಿಯ ಕೃತಾರ್ಥತೆಯೊಂದಿಗೆ ಕೈಜೋಡಿಸಿರುವ ನವಚೇತನ ಸಂಸ್ಥೆ ಇಲ್ಲಿಯ ಆರಂಭಿಸಿರುವ ಆರೋಗ್ಯ ಆರೈಕೆ ಕೇಂದ್ರ ಸಮಾಜಕ್ಕೆ ಮಾದರಿ ಮೇಲ್ಪಂಕ್ತಿಯನ್ನೊದಗಿಸಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಕಾಳಜಿಯುಕ್ತ ನೆಮ್ಮದಿಯ ಬದುಕಿಗೆ ಹಪಹಪಿಸುವ ಬದುಕಿಗೆ ಇಂತಹ ಕಾಳಜಿ ಕೇಂದ್ರಗಳು ಅಗತ್ಯವಿದೆ ಎಂದವರು ತಿಳಿಸಿದರು. ಭಗವಾನ್ ಬಾಬಾರ ಸಂದೇಶಗಳನ್ನು ಕೇವಲ ಶೃಂಗಾರಾತ್ಮಕವಾಗಿ ಬಳಸದೆ ನೈಜ ನೆಲೆಯಲ್ಲಿ ಸಾಕಾರತೆಯತ್ತ ಸಮಾಜಮುಖಿಯಾಗಿಸಿದ ಸುಮನಸ್ಸುಗಳು ಇನ್ಮನಷ್ಟು ಬೆಳೆದುಬಂದು ಸಮಾಜಕ್ಕೆ ಬೆಳಕು ತೋರಲಿ ಎಂದವರು ಆಶೀರ್ವಚನದಲ್ಲಿ ತಿಳಿಸಿದರು.
ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಎಚ್.ಮಹಾಲಿಂಗ ಭಟ್, ಡಾ.ವಿಜಯಲಕ್ಷ್ಮೀ ಸುಬ್ರಹ್ಮಣ್ಯಂ, ದಿವಾಣ ಗೋವಿಂದ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಹಿರಿಯ ವಕೀಲ ಐ.ವಿ.ಭಟ್ ಕಾಸರಗೋಡು ಅವರು ಜಾಲತಾಣ ಲೋಕಾರ್ಪಣೆಗೊಳಿಸಿದರು. ಪುತ್ತೂರು ನವಚೇತನ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಶಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ, ನೈಪುಣ್ಯ ಹಾಗೂ ಮಾನವೀಯತೆಗಳು ಜೊತೆಯಾದಾಗ ಸುದೃಢ ಸಮಾಜ ಬೆಳೆಯುತ್ತದೆ. ಇಂದಿನ ಕಾಲಮಾನಕ್ಕನುಸರಿಸಿ ಪರಸ್ಪರ ಕೈಜೋಡಿಸಿ ಮುನ್ನಡೆಸುವ ಚಟುವಟಿಕೆಗಳು ಹೆಚ್ಚು ಪರಿಣಾಮಕಾರಿಯಾಗಿ ಲಕ್ಷ್ಯ ಪ್ರಾಪ್ತಿ ಪಡೆಯುತ್ತದೆ. ಈ ನಿಟ್ಟಿನಲ್ಲಿ ನವಚೇನ ಆರೈಕೆ ಕೇಂದ್ರ ಹಲವು ಕನಸುಗಳನ್ನು ಸಾಕಾರಗೊಳಿಸುವತ್ತ ಸಾಗುತ್ತಿದೆ ಎಂದರು.
ಸುಶೀಲಾ ಶಾಮ ಭಟ್ ಸ್ವಾಗತಿಸಿ, ಶಾರದಾ ಉದಯಕುಮಾರ್ ವಂದಿಸಿದರು. ವಿಶ್ವನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು. ಪವನ್ ಕುಮಾರ್, ಶ್ರೀಸಾಯಿ ಸೇವಾ ಪ್ರತಿಷ್ಠಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಟ್ರಸ್ಟಿಗಳು, ಪುತ್ತೂರು ನವಚೇತನ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಶಾಮ ಭಟ್ ನವಚೇತನ ದಂಪತಿಗಳನ್ನು ಸಾಯಿನಿಕೇತನ ಸೇವಾಶ್ರಮದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಿಳಿಂಗಾರು ಸಾಯಿ ಮಂದಿರದಿಂದ ಆಗಮಿಸಿದ ರಾಘವೇಶ್ವರ ಶ್ರೀಗಳನ್ನು ಪೂರ್ಣಕುಂಭಗಳೊಂದಿಗೆ ವೇದ ಪುರಸ್ಸರವಾಗಿ ಸ್ವಾಗತಿಸಲಾಯಿತು.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಕೇಂದ್ರ ಸಚಿವ ಶ್ರೀಪಾದ ಯೆಸ್ಸೋ ನಾಯಕ್ ಭೇಟಿ ನೀಡಿ ಅಭಿನಂದಿಸಿದರು. ,
ಕರ್ನಾಟಕ ಶಾಸ್ತ್ರೀಯ ಸಂಗೀತ:
ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ ಬೆಳಗ್ಗೆ 9 ರಿಂದ ಪೂಜೆ, 11 ರಿಂದ ಡಾ.ವಿಜಯಲಕ್ಷ್ಮೀ ಸುಬ್ರಹ್ಮಣ್ಯಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಪಕ್ಕವಾದ್ಯದಲ್ಲಿ ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು(ವಯಲಿನ್), ವೆಂಕಟ ಯಶಸ್ವಿ ಕಬೆಕ್ಕೋಡು(ಮೃದಂಗ) ದಲ್ಲಿ ಸಹಕರಿಸಿದರು.




