ಜೈಪುರ: ಬೂತ್ ಮಟ್ಟದ ಅಧಿಕಾರಿಯಾಗಿ (ಬಿಎಲ್ಒ) ಕಾರ್ಯ ನಿರ್ವಹಿಸುತ್ತಿದ್ದ ಸರಕಾರಿ ಶಾಲಾ ಶಿಕ್ಷಕರೋರ್ವರು ರವಿವಾರ ಇಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಿಸಿದ ಕೆಲಸದ ತೀವ್ರ ಒತ್ತಡದಿಂದಾಗಿ ಅವರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಮೃತ ಮುಕೇಶ ಜಾಂಗಿಡ್ (45) ಅವರು ಜೈಪುರ ತಾಲೂಕಿನ ನಹ್ರಿ ಕಾ ಬಾಸ್ನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದು,ಅವರಿಗೆ ಬಿಎಲ್ಒ ಹೊಣೆಗಾರಿಕೆಯನ್ನೂ ವಹಿಸಲಾಗಿತ್ತು.
ಪೋಲಿಸರ ಪ್ರಕಾರ ಜಾಂಗಿಡ್ ಜೈಪುರ-ಫುಲೇರಾ ರೈಲು ಮಾರ್ಗದಲ್ಲಿ ಚಲಿಸುತ್ತಿದ್ದ ರೈಲಿನ ಮಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಾಂಗಿಡ್ ಕೆಲಸದ ಮತ್ತು ಮಾನಸಿಕ ಒತ್ತಡಗಳು ಹಾಗೂ ತನ್ನ ಮೇಲ್ವಿಚಾರಕರು ತನ್ನನ್ನು ಅಮಾನತುಗೊಳಿಸುವ ಸಾಧ್ಯತೆಯನ್ನು ಉಲ್ಲೇಖಿಸಿರುವ ಟಿಪ್ಪಣಿಯೊಂದನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಟಿಪ್ಪಣಿಯಲ್ಲಿಯ ವಿಷಯಗಳ ಆಧಾರದಲ್ಲಿ ಪೋಲಿಸರು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಜಾಂಗಿಡ್ ಕಲ್ವಾರ್ನ ಧರ್ಮಪುರ ಗ್ರಾಮದ ನಿವಾಸಿಯಾಗಿದ್ದರು. ಅವರು ತನ್ನ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದು ಸೋದರ ಗಜಾನಂದ ತಿಳಿಸಿದ್ದಾರೆ.
ಈ ಘಟನೆಯು ಶಿಕ್ಷಕರು ಮತ್ತು ಸರಕಾರಿ ನೌಕರರಲ್ಲಿ ಕಳವಳಗಳನ್ನು ಹುಟ್ಟುಹಾಕಿದೆ.
ರಾಜ್ಯ,ಜಿಲ್ಲಾ ಮತ್ತು ಉಪವಿಭಾಗ ಮಟ್ಟದ ಅಧಿಕಾರಿಗಳು ಅತ್ಯಂತ ಹೆಚ್ಚು ಎಸ್ಐಆರ್ ನೋಂದಣಿಗಳನ್ನು ಮಾಡಿಸುವ ಮೂಲಕ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿದ್ದು,ಇದು ಬಿಎಲ್ಒಗಳ ಮೇಲೆ ಹೆಚ್ಚಿನ ಹೊರೆಯನ್ನುಂಟು ಮಾಡುತ್ತಿದೆ ಎಂದು ಅಖಿಲ ರಾಜಸ್ಥಾನ ರಾಜ್ಯ ಕರ್ಮಚಾರಿ ಸಂಯುಕ್ತ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ಥಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಪಿನ್ ಪ್ರಕಾಶ್ ಶರ್ಮಾ ಹೇಳಿದರು.
ಅಧಿಕಾರಿಗಳು ಕೇವಲ ಸಂಖ್ಯೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಬದಲು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದರು.
ಪ್ರಕರಣದಲ್ಲಿ ಉಲ್ಲೇಖಿಸಲಾಗಿರುವ ಆಡಳಿತಾತ್ಮಕ ಒತ್ತಡದ ಕುರಿತು ಪ್ರತಿಕ್ರಿಯಿಸಿದ ಶರ್ಮಾ,ಬಿಎಲ್ಒಗಳಿಗೆ ಪರಿಹಾರ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅರ್ಧವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವಾಗ ಮತ್ತು ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿರುವಾಗ ಹೆಚ್ಚುವರಿ ಆಡಳಿತಾತ್ಮಕ ಕೆಲಸದ ಹೊರೆಗಳು ಮಕ್ಕಳ ಶಿಕ್ಷಣಕ್ಕೆ ಹಾನಿಯನ್ನುಂಟು ಮಾಡುತ್ತವೆ ಎಂದು ಶರ್ಮಾ ಎಚ್ಚರಿಕೆ ನೀಡಿದರು.
ಇತ್ತೀಚಿಗೆ ಬಿಎಲ್ಒ ಆಗಿ ಹೆಚ್ಚುವರಿ ಹೊಣೆಯನ್ನು ನಿರ್ವಹಿಸುತ್ತಿದ್ದ ಕೇರಳದ ಪಯ್ಯಾನೂರಿನ ಸರಕಾರಿ ಶಾಲೆಯ ಜವಾನ ಅನೀಶ ಜಾರ್ಜ್ ಕೂಡ ಎಸ್ಐಆರ್ ಪ್ರಕ್ರಿಯೆಯ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.




