ಕೊಚ್ಚಿ: ಶಬರಿಮಲೆ ದೇವಸ್ಥಾನದಲ್ಲಿ ಮಂಗಳವಾರ ಜನದಟ್ಟಣೆ ಉಂಟಾಗಿದ್ದರ ಕುರಿತು ಕೇರಳ ಹೈಕೋರ್ಟ್ ಬುಧವಾರ ದೇವಾಲಯದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 'ಅಧಿಕಾರಿಗಳ ಮಧ್ಯೆ ಸಮನ್ವಯ ಇಲ್ಲದ್ದಿದ್ದರಿಂದಲೇ ಇಂಥ ಘಟನೆ ಸಂಭವಿಸಿದೆ' ಎಂದು ಕೋರ್ಟ್ ಹೇಳಿದೆ.
'ಈ ಹಿಂದಿನ ಮಾರ್ಗಸೂಚಿಗಳನ್ನು ಯಾಕೆ ಪಾಲನೆ ಮಾಡಿಲ್ಲ. ಜನದಟ್ಟಣೆಯನ್ನು ನಿಭಾಯಿಸಲು ಯಾಕೆ ಮುಂಚಿತವಾಗಿ ತಯಾರಿ ನಡೆಸಿಕೊಂಡಿಲ್ಲ' ಎಂದು ನ್ಯಾಯಾಲಯವು ತಿರುವಾಂಕೂರು ದೇವಸ್ವಂ ಮಂಡಳಿಯನ್ನು (ಟಿಡಿಬಿ) ಪ್ರಶ್ನಿಸಿತು.
'ಆರು ತಿಂಗಳ ಮೊದಲೇ ಎಲ್ಲ ಸಿದ್ಧತೆಗಳು ಮುಕ್ತಾಯಗೊಳ್ಳಬೇಕಿತ್ತು' ಎಂದು ನ್ಯಾಯಾಲಯ ಹೇಳಿತು. ಇದಕ್ಕೆ, 'ಹೌದು, ಆರು ತಿಂಗಳ ಹಿಂದೆಯೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು' ಎಂದು ಮಂಡಳಿಯ ಮುಖ್ಯಸ್ಥ ಕೆ. ಜಯರಾಮ್ ಹೇಳಿದರು.
'ಒಂದೇ ಸಮಯದಲ್ಲಿ ಎಲ್ಲ ಭಕ್ತರನ್ನು ಒಮ್ಮೆಗೆ ದೇವಸ್ಥಾನದ ಒಳಗೆ ಬಿಟ್ಟಿದ್ದು ಯಾಕೆ? ಭಕ್ತರನ್ನು ಗುಂಪು ಗುಂಪಾಗಿ ಕಳುಹಿಸಬೇಕಿತ್ತು. ಇದನ್ನು ಮಾಡುವುದು ಬಿಟ್ಟು ಭಕ್ತರನ್ನು ಮುಂದೆ ದೂಡಲಾಯಿತು. ಇದರಿಂದಲೇ ಸಮಸ್ಯೆಯಾಗುತ್ತದೆ' ಎಂದು ಅಭಿಪ್ರಾಯಪಟ್ಟಿತು.
ನವೆಂಬರ್ 17ರಂದು ದೇವಸ್ಥಾನ ಬಾಗಿಲು ತೆರೆದ 48 ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದು, ಜನದಟ್ಟಣೆಯನ್ನು ನಿಯಂತ್ರಿಸಲು ಟಿಡಿಬಿ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸಪಡಬೇಕಾಯಿತು. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ಕುಡಿಯಲು ನೀರು ಸಹ ಸಿಕ್ಕಿರಲಿಲ್ಲ. ಕೋಯಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ತಾಲ್ಲೂಕಿನ 58 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದರು.

ಶಬರಿಮಲೆ




