ಕಾಸರಗೋಡು: ವಿಧಾನಸಭಾ ಚುನಾವಣೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭವಾಗಿದ್ದು, ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಗಣತಿ ನಮೂನೆ(ಎನ್ಯೂಮರೇಷನ್), ಫಾರ್ಮ್ 6 ಸೇರಿದಂತೆ ಎಲ್ಲಾ ಅರ್ಜಿ ನಮೂನೆಗಳನ್ನು ಕನ್ನಡದಲ್ಲೂ ಮುದ್ರಿಸಿ ನೀಡುವ ಬಗ್ಗೆ ರಾಜ್ಯ ಚುನಾವಣಾ ಆಯೋಗದಿಂದ ಭರವಸೆ ಲಭಿಸಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಣತಿ ನಮೂನೆ ಸೇರಿದಂತೆ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ನೋಟೀಸು ಹಾಗೂ ನಿರ್ದೇಶಗಳನ್ನು ಕನ್ನಡ ಭಾಷೆಯಲ್ಲಿಯೂ ಲಭ್ಯವಾಗಿಸಬೇಕೆಂದು ಚುನಾವಣಾ ಆಯೋಗಕ್ಕೆ ಬಿಜೆಪಿ ವತಿಯಿಂದ ಸಲ್ಲಿಸಿದ ಮನವಿ ಪರಿಗಣಿಸಿ ಅಧಿಕಾರಿಗಳು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ಲಭಿಸಿದೆ. ಈ ಬಗ್ಗೆ ಒಂದೆರಡು ದಿವಸಗಳಲ್ಲಿ ಅಧ್ಯಾದೇಶ ಹೊರಬರಲಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸೇರಿದಂತೆ ಕಡತಗಳು ಕನ್ನಡ ಮತ್ತು ಮಲಯಾಳ ಎರಡೂ ಭಾಷೆಗಳಲ್ಲಿ ಲಭ್ಯವಾಗಿಸಬೇಕು ಎಂದು ರಾಷ್ಟ್ರೀಯ ಚುನಾವಣಾ ಆಯೋಗವು ನಿರ್ಧರಿಸಿದ್ದರೂ, ಅದಕ್ಕೆ ವಿರುದ್ಧವಾಗಿ ಗಣತಿ ನಮೂನೆ(ಎನ್ಯೂಮರೇಷನ್) ಸೇರಿ ಎಲ್ಲಾ ನಮೂನೆಗಳನ್ನು ಕೇವಲ ಮಲಯಾಳಂ ಭಾಷೆಯಲ್ಲಿ ಮಾತ್ರ ತಯಾರಿಸಲಾಗಿದೆ. ಕನ್ನಡ ಮಾತ್ರ ತಿಳಿದಿರುವ ಮತದಾರರಿಗೆ ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿರುವುದನ್ನು ಅಶ್ವಿನಿ ಅವರು ಪತ್ರದ ಮೂಲಕ ರಾಜ್ಯ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದದರು.




