ಕಾಸರಗೋಡು : ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಭಕ್ತರನ್ನು ಹೊತ್ತ ಖಾಸಗಿ ಬಸ್ ಕಾಸರಗೋಡಿನಲ್ಲಿ ಭೀಕರ ಅಪಘಾತಕ್ಕೊಳಗಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪ ಚಿತ್ತಾರಿಕ್ಕಲ್ ಬಳಿ ಆಳವಾದ ಕಮರಿಗೆ ಬಸ್ ಉರುಳಿ ಬಿದ್ದ ಪರಿಣಾಮ, ಹಲವು ಯಾತ್ರಿಕರು ಗಾಯಗೊಂಡಿದ್ದಾರೆ.
ಅಪಘಾತದ ವಿವರಗಳು:
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತಕ್ಕೊಳಗಾದ ಬಸ್ ಕರ್ನಾಟಕದ ಮೈಸೂರು ಮೂಲದ ಅಯ್ಯಪ್ಪ ಭಕ್ತರನ್ನು ಹೊತ್ತಿತ್ತು. ಸುಮಾರು 55 ಯಾತ್ರಿಕರು ಬಸ್ನಲ್ಲಿ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. ಬಸ್ ಪರ್ವತ ಪ್ರದೇಶದಲ್ಲಿ ಸಾಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಒಬ್ಬರು ಮೃತ ಪಟ್ಟಿದ್ದು ಎಲ್ಲಾ 44 ಜನರೂ ಗಾಯಗೊಂಡಿದ್ದು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ:
ಅಪಘಾತ ಸಂಭವಿಸಿರುವುದು ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಗಡಿ ಪ್ರದೇಶವಾಗಿದ್ದು, ಸ್ಥಳ ತಲುಪಲು ವಿಪತ್ತು ನಿರ್ವಹಣಾ ಸಿಬ್ಬಂದಿ ಮತ್ತು ಪೊಲೀಸರು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಸದ್ಯ ಬಸ್ನೊಳಗೆ ಸಿಲುಕಿರುವವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ತುರ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಗಾಯಾಳುಗಳನ್ನು ಸುರಕ್ಷಿತವಾಗಿ ರಕ್ಷಿಸಲು ಸಮನ್ವಯದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಗಾಯಾಳುಗಳ ಸ್ಥಿತಿ
ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆಯಲ್ಲಿ ಮೂರು ಮಂದಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನೂ ಕೆಲವು ಯಾತ್ರಿಕರು ಬಸ್ ಒಳಗೆ ಸಿಲುಕಿರುವ ಶಂಕೆ ಇದೆ. ಗಾಯಾಳುಗಳ ನಿಖರ ಸಂಖ್ಯೆ ಹಾಗೂ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.
ಪಾಣತ್ತೂರು ಪ್ರದೇಶದಲ್ಲಿ ರಸ್ತೆ ತಿರುವು ಹೆಚ್ಚಿನ ತೀವ್ರತೆಯಲ್ಲಿರುವುದರಿಂದ ಈ ರೀತಿ ಅಪಘಾತಗಳು ಆಗಾಗ ಸಂಭವಿಸುವುದಾಗಿ ಸ್ಥಳೀಯರು ಹೇಳಿದ್ದಾರೆ. ಬಸ್ ನಿಯಂತ್ರಣ ತಪ್ಪಲು ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.





