ಮುಂಬೈ: ದೇಶಿ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'ಐಎಎನ್ಎಸ್ ಮಾಹೆ'ಯು ಭಾರತೀಯ ನೌಕಾಪಡೆಗೆ ಸೋಮವಾರ ಸೇರ್ಪಡೆಗೊಂಡಿತು.
ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹೊಸ ತಲೆಮಾರಿನ ದೇಶೀಯ ಯುದ್ಧ ನೌಕೆಯನ್ನು ನೌಕಾಪಡೆಗೆ ಸೇರ್ಪಡೆ ಮಾಡಿದರು.
'ಮಾಹೆ'ಯನ್ನು ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (ಸಿಎಸ್ಎಲ್) ನಿರ್ಮಿಸಿದ್ದು, ನೌಕೆಯ ವಿನ್ಯಾಸ ಹಾಗೂ ನಿರ್ಮಾಣವು ಆತ್ಮನಿರ್ಭರ ಭಾರತ ಉಪಕ್ರಮವನ್ನು ಪ್ರತಿನಿಧಿಸುತ್ತದೆ.
ಕರಾರುವಾಕ್ಕಾದ ಗುರಿ ಮತ್ತು ಚುರುಕುತನದ ಮೂಲಕ ದೇಶದ ಕರಾವಳಿಯಲ್ಲಿ ಪ್ರಾಬಲ್ಯ ಸಾಧಿಸಲು ಬೇಕಾದ ಸಾಮರ್ಥ್ಯವನ್ನು ಮಾಹೆ ಯುದ್ಧ ನೌಕೆ ಹೊಂದಿದೆ. ರಹಸ್ಯ ಕಾರ್ಯಾಚರಣೆ, ಕರಾವಳಿ ಗಸ್ತು, ಜಲಾಂತರ್ಗಾಮಿ ನೌಕೆಗಳ ನಿಗ್ರಹ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ನೌಕಾಪಡೆಯು ತಿಳಿಸಿದೆ.
ವೈಶಿಷ್ಟ್ಯಗಳು
* ಟಾರ್ಪೆಡೊ (ಜಲ ಕ್ಷಿಪಣಿ) ಜಲಾಂತರ್ಗಾಮಿ ನಿಗ್ರಹ ರಾಕೆಟ್ಗಳನ್ನು ಒಳಗೊಂಡಿರಲಿದೆ
* ನೌಕೆ ನಿರ್ಮಾಣಕ್ಕೆ ಶೇಕಡ 80ರಷ್ಟು ದೇಶೀಯ ವಸ್ತುಗಳ ಬಳಕೆ
*ಮಾಹೆ ಶ್ರೇಣಿಯ ಮೊದಲ ಜಲಾಂತರ್ಗಾಮಿ ನಿಗ್ರಹ ನೌಕೆ
* ನೌಕೆಗೆ ಮಲಬಾರಿನ ಐತಿಹಾಸಿಕ ಕರಾವಳಿ ನಗರ 'ಮಾಹೆ'ಯ ಹೆಸರನ್ನು ಇಡಲಾಗಿದೆ
*ನೌಕೆಯ ಲಾಂಛನದಲ್ಲಿ ಕಳರಿಪಯಟ್ಟು ಯುದ್ಧ ಕಲೆಯಲ್ಲಿ ಬಳಸುವ ಕತ್ತಿ (ಉರುಮಿ) ಚಿಹ್ನೆ ಬಳಕೆ. ಚುರುಕುತನ ನಿಖರತೆ ಕರಾರುವಕ್ಕಾದ ಗುರಿಯ ಸಂಕೇತವಾಗಿ ಬಳಕೆ.




