ನವದೆಹಲಿ: ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಭಾಗವಾಗಿ ಶೇ 99ಕ್ಕೂ ಹೆಚ್ಚು ಮತದಾರರಿಗೆ ಗಣತಿ ಅರ್ಜಿ ನಮೂನೆಗಳನ್ನು ವಿತರಿಸಲಾಗಿದೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ.
ಎರಡನೇ ಹಂತದ ಎಸ್ಐಆರ್ ಪ್ರಕ್ರಿಯೆಯಲ್ಲಿ ಈವರೆಗೆ 50.50 ಕೋಟಿ ಅರ್ಜಿ ನಮೂನೆಗಳನ್ನು ವಿತರಿಸಲಾಗಿದೆ. ಅಂದರೆ, ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಒಟ್ಟು 50.97 ಕೋಟಿ ಮತದಾರರಲ್ಲಿ ಇದುವರೆಗೆ ಶೇ 99.07ರಷ್ಟು ಮಂದಿಗೆ ಅರ್ಜಿ ನಮೂನೆ ವಿತರಿಸಿದಂತೆ ಆಗಿದೆ ಎಂದು ಹೇಳಿದೆ.
ಮೊದಲ ಹಂತದ ಎಸ್ಐಆರ್ ಪ್ರಕ್ರಿಯೆಯನ್ನು ಬಿಹಾರದಲ್ಲಿ ನಡೆಸಲಾಗಿದೆ. ಚುನಾವಣಾ ಆಯೋಗವು ಎರಡನೇ ಹಂತದಲ್ಲಿ ಛತ್ತೀಸಗಢ, ಗೋವಾ, ಗುಜರಾತ್, ಕೇರಳ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದೆ. ಇಲ್ಲಿ ಗಣತಿ ಪ್ರಕ್ರಿಯೆ ನ.4ರಂದು ಆರಂಭವಾಗಿದ್ದು, ಡಿ.4ರವರೆಗೆ ಮುಂದುವರಿಯಲಿದೆ.
ಎಸ್ಐಆರ್ ಕೈಗೊಂಡಿರುವ ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.
ಕ್ಯಾಂಪ್ ಕಚೇರಿಗೆ ಬೆಂಕಿ: ಟಿಎಂಸಿ ಆರೋಪ (ಕೋಲ್ಕತ್ತ ವರದಿ): ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಕಲ್ಯಾಣಿ ಪಟ್ಟಣದಲ್ಲಿ ಪಕ್ಷವು ನಿರ್ಮಿಸಿದ್ದ ಎಸ್ಐಆರ್ ಕ್ಯಾಂಪ್ ಕಚೇರಿಗೆ ಬಿಜೆಪಿ ಬೆಂಕಿ ಹಚ್ಚಿದೆ ಎಂದು ತೃಣಮೂಲ ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
'ಕಲ್ಯಾಣಿ ಪಟ್ಟಣದ ವಾರ್ಡ್ ಸಂಖ್ಯೆ 6ರಲ್ಲಿರುವ ಕಚೇರಿಯನ್ನು ಧ್ವಂಸಗೊಳಿಸಿ, ಸುಟ್ಟುಹಾಕಲಾಗಿದೆ. ಇದು ಬಿಜೆಪಿಯವರ ಕೆಲಸ' ಎಂದು ಟಿಎಂಸಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ. ಧ್ವಂಸಗೊಂಡ ಕಚೇರಿಯ ವಿಡಿಯೊವನ್ನು ಹಂಚಿಕೊಂಡಿದೆ.




