ಹೈದರಾಬಾದ್: ತಮ್ಮ ಬ್ರಾಂಡ್ ಅಥವಾ ಉತ್ಪನ್ನದ ಹೆಸರುಗಳಲ್ಲಿ ಓಆರ್ಎಸ್ ಪದವನ್ನು ಬಳಸುವ ಎಲ್ಲಾ ಪಾನೀಯಗಳ ಮಾರಾಟವನ್ನು ತಕ್ಷಣವೇ ರದ್ದುಪಡಿಸಬೇಕೆಂದು ಭಾರತೀಯ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಪ್ರಾಧಿಕಾರ ( ಎಫ್ಎಸ್ಎಸ್ಎಐ)ವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಪ್ರಾಧಿಕಾರಗಳಿಗೆ ನಿರ್ದೇಶನವನ್ನು ನೀಡಿದ್ದಾರೆ.
ಓಆರ್ಎಸ್ ಪದವನ್ನು ತಮ್ಮ ಬ್ರಾಂಡ್ ಅಥವಾ ಉತ್ಪನ್ನದಲ್ಲಿ ಬಳಸುವ ಹಣ್ಣಿನ ಲಘುಪಾನೀಯಗಳು, ದಿಢೀರ್ ತಯಾರಿಯ ಪಾನೀಯಗಳು, ಶಕ್ತಿ ಪೇಯಗಳು, ಇಲೆಕ್ಟ್ರೋಲೈಟ್ ಲಘುಪಾನೀಯಗಳು ಹಾಗೂ ತತ್ಸಮಾನ ಉತ್ಪನ್ನಗಳಿಗೆ ಈ ಆದೇಶವು ಅನ್ವಯಿಸುತ್ತದೆ.
ಆಕ್ಟೋಬರ್ 14 ಹಾಗೂ 15ರಂದು ಈ ಬಗ್ಗೆ ಆದೇಶವನ್ನು ಹೊರಡಿಸಿದ್ದರೂ, ಹಲವಾರು ತಯಾರಕ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಓಆರ್ಎಸ್ ಎಂಬ ಹಣೆಪಟ್ಟಿಯೊಂದಿಗೆ ಮಾರಾಟ ಮಾಡುವುದನ್ನು ಮುಂದುವರಿಸಿದ್ದಾರೆ ಎಂದು ಎಫ್ಎಸ್ಎಸ್ಎಐ ನವೆಂಬರ್ 19ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
'ಓಆರ್ಎಸ್' ಪದ ಬಳಕೆಯು 2006ರ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ. ಯಾಕೆಂದರೆ ಈ ಪದವನ್ನು ನಿರ್ದಿಷ್ಟವಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ಓ)ಯು ಶಿಫಾರಸು ಮಾಡಿರುವ ಔಷಧಿ ಉತ್ಪನ್ನವಾದ ಮೌಖಿಕ ಪುನರ್ಜಲೀಕರಣ ಲವಣ (ಓರಲ್ ರೀಹೈಡ್ರೇಶನ್ ಸಾಲ್ಟ್ಸ್)ಕ್ಕೆ ಬಳಸಲಾಗುತ್ತದೆ. ಇದನ್ನು ನಿರ್ಜಲೀಕರಣದ ಸಮಸ್ಯೆಗೆ ಬಳಸಲಾಗುತ್ತದೆ ಎಂದು ಎಫ್ಎಸ್ಎಸ್ ಹೇಳಿಕೆ ತಿಳಿಸಿದೆ.
ಓಆರ್ಎಸ್ ಹೆಸರಿನಲ್ಲಿ ಜನಸಾಮಾನ್ಯರನ್ನು ದಾರಿತಪ್ಪಿಸುವ ಉತ್ಪನ್ನಗಳು ಈಗಲೂ ದಿನಸಿ ಅಂಗಡಿಗಳಲ್ಲಿ, ಅಧುನಿಕ ರಿಟೇಲ್ ಮಳಿಗೆಗಳಲ್ಲಿ ಹಾಗೂ ಪ್ರಮುಖ ಇ-ಕಾಮರ್ಸ್ ಪ್ಲ್ಯಾಟ್ ಫಾರ್ಮ್ಗಳಲ್ಲಿ ಲಭ್ಯವಿದೆ. ಈ ಲಘುಪಾನೀಯಗಳಿಂದಾಗಿ, ನಿರ್ಜಲೀಕರಣ ಚಿಕಿತ್ಸೆಗೆ ಬಳಸುವ ಓಆರ್ಎಸ್ ಬಗ್ಗೆ ಗ್ರಾಹಕರಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ.
' ಓಆರ್ಎಸ್' ಹೆಸರಿನಲ್ಲಿ ಅತಿಯಾದ ಸಕ್ಕರೆ ಅಂಶವಿರುವ ಲಘುಪಾನೀಯಗಳನ್ನು ಮಾರಾಟ ಮಾಡುತ್ತಿರುವ ಫಾರ್ಮಾಸ್ಯೂಟಿಕಲ್ ಕಂಪೆನಿಗಳ ವಿರುದ್ಧ ಹೈದರಾಬಾದ್ ಮೂಲದ ಶಿಶುರೋಗ ತಜ್ಞ ಡಾ.ಶಿವರಂಜನಿ ಸಂತೋಷ್ ಎಂಟು ವರ್ಷಗಳಿಂದ ಕಾನೂನು ಹೋರಾಟ ನಡೆಸಿದ ಪರಿಣಾಮವಾಗಿ ಎಫ್ಎಸ್ಎಸ್ಎಐ ಆಕ್ಟೋಬರ್ನಲ್ಲಿ ಈ ನಿರ್ದೇಶನವನ್ನು ಹೊರಡಿಸಿತ್ತು.




