ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 170 ಸಮಗ್ರ ಮತ್ತು ತೀವ್ರವಾದ ಮತದಾರರ ಪಟ್ಟಿ ಪರಿಷ್ಕರಣೆ(ಎಸ್.ಐ.ಆರ್) ಪ್ರಕ್ರಿಯೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಿ ದಾಖಲೆ ನಿರ್ಮಿಸಿದೆ. ಅಣಂಗೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿರುವ ಬಿ.ಎಲ್.ಒ. ವಿಖ್ಯಾತ್ ಬಿ. ರೈ ಅವರು ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್, ಶಾಸಕ ಎ.ಕೆ.ಎಂ. ಅಶ್ರಫ್ ಮತ್ತು ಇತರರ ಚಪ್ಪಾಳೆ ಗಿಟ್ಟಿಸಿಕೊಂಡರು. ಅವರನ್ನು ಮೊದಲ ಬಾರಿಗೆ ಇತ್ತೀಚೆಗೆಯಷ್ಟೇ ಬಿಎಲ್.ಒ. ಆಗಿ ನೇಮಿಸಲಾಗಿತ್ತು. ಬೂತ್ನಲ್ಲಿ 1135 ಮತದಾರರಿದ್ದಾರೆ. ನಮೂನೆಗಳ ವಿತರಣೆ ಮತ್ತು ಸಂಗ್ರಹ ಬೆಳಿಗ್ಗೆ 10 ರಿಂದ ಸಂಜೆ 5ರ ಮಧ್ಯೆ ನಿರ್ವಹಿಸಿದ್ದು 15 ದಿನಗಳಲ್ಲೇ ಪೂರ್ಣಗೊಳಿಸಲಾಗಿದೆ. ಶಿರಿಯ ಹೊಳೆಯ ದಡದಲ್ಲಿರುವ ಹೊಲಗಳು ಮತ್ತು ಅಡಕೆ ತೋಟಗಳ ಮೂಲಕ ಮನೆಯಿಂದ ಮನೆಗೆ ಪ್ರಯಾಣಿಸಿ ವಿಖ್ಯಾತ್ ರೈ ಈ ದಾಖಲೆ ನಿರ್ಮಿಸಿದ್ದಾರೆ.
ದೈನಂದಿನ ದಿನಚರಿ ಬೆಳಿಗ್ಗೆ 9.30 ಕ್ಕೆ ಎಲೆಕ್ಟ್ರಾನಿಕ್ ಸ್ಕೂಟರ್ನಲ್ಲಿ ಪ್ರಾರಂಭವಾಗಿ ರಾತ್ರಿ 11.30 ಕ್ಕೆ ಕೊನೆಗೊಳಿಸುತ್ತಿದ್ದರು. ಮನೆಗೆ ಆಗಮಿಸಿ ಹಗಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಕ್ರೋಢೀಕರಿಸಿ ಬರೆದು ಮುಗಿಸಿ ಮಲಗುವಾಗ ಸಮಯ ಮುಂಜಾನೆ 3.30 ಆಗುತ್ತಿತ್ತು ಎಂದವರು ತಿಳಿಸಿದ್ದಾರೆ. ಕನ್ನಡದಲ್ಲಿ ಯಾವುದೇ ಫಾರ್ಮ್ ಇಲ್ಲದ ಕಾರಣ, ಮಲಯಾಳಂ ಫಾರ್ಮ್ ಅನ್ನು ಕನ್ನಡದಲ್ಲಿ ಪೆನ್ಸಿಲ್ನಿಂದ ಬರೆದು ಅವರು ಕೆಲಸ ಸುಲಭಗೊಳಿಸಿದ್ದರು. ಪ್ರತಿದಿನ ನೀಡಲಾಗುವ ಮತ್ತು ಹಿಂತಿರುಗಿಸಲಾಗುವ ಫಾರ್ಮ್ಗಳಲ್ಲಿ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಗುರುತು ಹಾಕಲಾಗಿತ್ತು.
ವಿತರಣೆ, ಸಂಗ್ರಹಣೆ ಮತ್ತು ಎಸ್.ಐ.ಆರ್. ಅಪ್ಲಿಕೇಶನ್ ಅಪ್ಲೋಡ್ ಅನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು ರಾಜಕೀಯ ಕಾರ್ಯಕರ್ತರು ಮತ್ತು ಕ್ಲಬ್ ಕಾರ್ಯಕರ್ತರಿಂದ ಸಹಾಯ ಪಡೆದಿದ್ದೇನೆ ಎಂದು ವಿಖ್ಯಾತ್ ಹೇಳಿದ್ದಾರೆ. 2002 ಮತ್ತು 2025 ರ ಮತದಾರರ ಪಟ್ಟಿಯನ್ನು ಪರಸ್ಪರ ಹೋಲಿಸಿ ಹೊಸ ಎಸ್.ಐ.ಆರ್. ನಮೂನೆ ಸಿದ್ದಪಡಿಸಲಾಗುತ್ತದೆ.




.jpg)
