ಹೈದರಾಬಾದ್: 'ಮುತ್ತಿನ ನಗರಿ'ಯಲ್ಲಿ ಲಯೊನೆಲ್ ಮೆಸ್ಸಿ ಕಾರ್ಯಕ್ರಮವು ಯಾವುದೇ ಗೊಂದಲಗಳಿಲ್ಲದೇ ಸಾಂಗವಾಗಿ ನೆರವೇರಿತು.
ಕೋಲ್ಕತ್ತದ ಭೇಟಿಯ ನಂತರ ಅವರು ಶನಿವಾರ ಸಂಜೆ ಹೈದರಾಬಾದ್ಗೆ ಬಂದಿಳಿದರು.
ಕೋಲ್ಕತ್ತದ ಸಾಲ್ಟ್ ಲೇಕ್ನಲ್ಲಿ ಅಭಿಮಾನಿಗಳ ಗದ್ದಲದ ಸುದ್ದಿಯಿಂದ ಹೈದರಾಬಾದಿನಲ್ಲಿ ತುಸು ಆತಂಕದ ವಾತಾವರಣ ಇತ್ತು. ಅಂತಹ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.
ಉಪ್ಪಳದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನಸ್ತೋಮ ತಮ್ಮ ನೆಚ್ಚಿನ ತಾರೆಯನ್ನು ಕಣ್ತುಂಬಿಕೊಂಡರು. ಸಂಜೆ 5.40ಕ್ಕೆ ನಗರಕ್ಕೆ ಬಂದರು. ತಾಜ್ ಫಲಕನುಮಾ ಪ್ಯಾಲೆಸ್ನಲ್ಲಿ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಮೆಸ್ಸಿ ಮತ್ತು ಸಂಗಡಿಗರನ್ನು ಸ್ವಾಗತಿಸಿದರು. ಹಸಿರುಬಣ್ಣದ ಅರ್ಧತೋಳಿನ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್, ಸ್ಪೋರ್ಟ್ಸ್ ಶೂಗಳನ್ನು ಧರಿಸಿದ್ದ ಮೆಸ್ಸಿ ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆಯೇ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತು. ಸುಮಾರು ಒಂದು ಗಂಟೆ ಮೆಸ್ಸಿ ಅವರು ಕ್ರೀಡಾಂಗಣದಲ್ಲಿದ್ದರು.
'ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿರುವೆ. ನನಗೆ ಬಹಳ ಸಂತಸವಾಗಿದೆ' ಎಂದು ಮೆಸ್ಸಿ ಹೇಳಿದರು.
ಈ ಸಂದರ್ಭದಲ್ಲಿ ಗೋಟ್ ಕಪ್ ಪೆನಾಲ್ಟಿ ಶೂಟೌಟ್ ನಲ್ಲಿ ಮೆಸ್ಸಿ ಅವರು ಮುಖ್ಯ ಮಂತ್ರಿ ರೆಡ್ಡಿಯೊಂದಿಗೆ ಆಡಿದರು. ಮಕ್ಕಳಿಗೆ ಫುಟ್ಬಾಲ್ ಕ್ಲಿನಿಕ್ ಕೂಡ ನಡೆಸಿಕೊಟ್ಟರು.
ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಮತ್ತು ರೆಡ್ಡಿ ಅವರು ಮೆಸ್ಸಿಯ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾದರು.

