ಬದಿಯಡ್ಕ: ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ವೈದಿಕ ತಾಂತ್ರಿಕ ವಿದ್ಯಾಪೀಠದ ನಾಲ್ಕು ದಿನಗಳ ಕಾಲದ ವಾರ್ಷಿಕೋತ್ಸವದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಜರಗಿತು. ಉದ್ಘಾಟನೆ ನೆರವೇರಿಸಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಯುವ ತಲೆಮಾರಿಗೆ ಭಾರತೀಯ ಶಾಸ್ತ್ರೀಯ ಸಂಗೀತ ಶಿಕ್ಷಣ ನೀಡುತ್ತಿರುವ ವೀಣಾವಾದಿನಿ ಸಂಸ್ಥೆಯನ್ನು ಶ್ಲಾಘಿಸಿದರಲ್ಲದೆ ಸಂಗೀತದ ಜೊತೆಗೆ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯುವ ಈ ಶಿಕ್ಷಣ ಸಂಸ್ಥೆ ಕಾಸರಗೋಡಿನಲ್ಲಿ ಅದ್ದಿತೀಯವಾದದ್ದು ಎಂದು ವರ್ಣಿಸಿದರು. ಈ ಪರಿಸರದಲ್ಲಿ ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಪ್ರಯತ್ನ ನಡೆಯಬೇಕಾಗಿದೆ. ಜೊತೆಗೆ ಭಾರತೀಯ ಪರಂಪರೆಯ ಧಾರ್ಮಿಕ ಸಾಂಸ್ಕೃತಿಕ ತಿಳುವಳಿಕೆಯನ್ನು ಯುವ ಜನತೆಗೆ ನೀಡಬೇಕಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕೇರಳದ ಅಲ್ವಾಯಿಯ ತಾಂತ್ರಿಕ ವಿದ್ಯಾಪೀಠದ ಪ್ರಾಂಶುಪಾಲರಾದ ಪುತ್ತೂರಿನ ಪೈರಪುಣಿ ಬಾಲಕೃಷ್ಣ ಭಟ್, ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ, ಬದಿಯಡ್ಕದ ವೈದ್ಯ ಡಾ. ಶ್ರೀನಿಧಿ ಸರಳಾಯ ಹಾಗೂ ಬೇಳದ ಕೌಮುದಿ ನೇತ್ರಾಲಯದ ನೇತ್ರತಜ್ಞ ಡಾ.ಸುನಿಲ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜಾರಾಮ್ ಪೆರ್ಲ ಅವರು ನಿರ್ವಹಿಸಿದರು. ಸಂಚಾಲಕರಾದ ಯೋಗೀಶ ಶರ್ಮ ಅವರು ವಿದ್ಯಾಲಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾಡಿದರು. ಶ್ರೀಹರಿ ನೀಲಂಗಳ ಅವರು ವಂದಿಸಿದರು.
ಬಳಿಕ ಸಂಗೀತ ಗುರುಗಳು ಹಾಗೂ ವಿದ್ಯಾರ್ಥಿಗಳ ಸಾಮೂಹಿಕ ನವಾವರಣ ಸಂಗೀತದ ಜೊತೆಗೆ ಮುಲ್ಲಪಲ್ಲಿ ಕೃಷ್ಣನ್ ನಂಬೂದಿರಿ ನೇತೃತ್ವದಲ್ಲಿ ಅಪರೂಪದ ಶ್ರೀಚಕ್ರ ಪೂಜೆ ಜರಗಿತು.
ಬೆಳಗ್ಗೆ ಉದ್ಘಾಟನೆಯ ಬಳಿಕ ಶ್ರೀಶಂಕರನ್ ಮಳಿಯೂರು ಎಂಬ ಪ್ರತಿಭಾವಂತ ಬಾಲಕಲಾವಿದನ ನೇತೃತ್ವದಲ್ಲಿ ಸಮನ್ವಯ ಎಂಬ ವಿವಿಧ ವಾದ್ಯವಾದನಗಳ ಸಂಯೋಗದಲ್ಲಿ ಫ್ಯೂಶನ್ ವಾದ್ಯಮೇಳ ಜರಗಿತು.

.jpg)
.jpg)
