ನವದೆಹಲಿ: ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಗುರುವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಕೇರಳದ ಮೂಲಕ ಹಾದುಹೋಗುವ ಆರು ಪ್ರಮುಖ ರಸ್ತೆ ಯೋಜನೆಗಳ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಯೂಟ್ಯೂಬ್ ನೋಡಿ ತಯಾರಿಸಿದ ಖಾದ್ಯವನ್ನು ಸವಿಯುವಂತೆ ಪ್ರಿಯಾಂಕಾ ಅವರಿಗೆ ಗಡ್ಕರಿ ತಿಳಿಸಿದ್ದಾರೆ.
ಇತ್ತೀಚೆಗೆ ಅಡುಗೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ಗಡ್ಕರಿ ಅವರು ಕೆಲವು ಯೂಟ್ಯೂಬ್ ವಿಡಿಯೊಗಳನ್ನು ನೋಡಿ ಅಕ್ಕಿ ಉಂಡೆ ತಯಾರಿಸಿದ್ದರು. ಇಂದು(ಗುರುವಾರ) ಅವರ ಕಚೇರಿಗೆ ಭೇಟಿ ನೀಡಿದ ಎಲ್ಲರಿಗೂ ಅದರ ರುಚಿ ನೋಡುವಂತೆ ಒತ್ತಾಯಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರಿಗೂ ಚಟ್ನಿಯೊಂದಿಗೆ ಅಕ್ಕಿ ಉಂಡೆಯನ್ನು ಬಡಿಸಿದ್ದಾರೆ.
ಪ್ರಿಯಾಂಕಾ ಅವರ ಜೊತೆಗೆ ಬಂದಿದ್ದ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹೂಡಾ ಅವರಿಗೂ ರುಚಿ ನೋಡುವಂತೆ ಗಡ್ಕರಿ ತಿಳಿಸಿದ್ದಾರೆ. ಈ ಕುರಿತ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಏನತ್ಮಧ್ಯೆ, ಪ್ರಿಯಾಂಕಾ ಅವರ ಪ್ರಸ್ತಾಪವನ್ನು ಸ್ವೀಕರಿಸಿದ ಗಡ್ಕರಿ, ಕೆಲ ಯೋಜನೆಗಳು ಕೇರಳ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಅವುಗಳನ್ನು ಕೇಂದ್ರ ನಿರ್ವಹಿಸಲು ಸಾಧ್ಯವಿಲ್ಲ. ಕೇಂದ್ರದ ಅಡಿಯಲ್ಲಿ ಬರುವ ಇತರ ಯೋಜನೆಗಳ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, 'ರಾಜ್ಯದ ವ್ಯಾಪ್ತಿಗೆ ಬಂದರೆ ಪರವಾಗಿಲ್ಲ... ಕೇರಳದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ, ನಾವು ಅದನ್ನು ನೋಡಿಕೊಳ್ಳುತ್ತೇವೆ' ಎಂದು ಹೇಳಿದ್ದಾರೆ.

