HEALTH TIPS

100 ನಾಯಿಗಳಿಗೆ ವಿಷಕಾರಿ ಚುಚ್ಚುಮದ್ದು: ಪ್ರಕರಣ ದಾಖಲು

ಹೈದರಾಬಾದ್‌: ಬೀದಿ ನಾಯಿಗಳನ್ನು ಕೊಲ್ಲುವ ಉದ್ದೇಶದಿಂದ ಸುಮಾರು 100 ನಾಯಿಗಳಿಗೆ ವಿಷಕಾರಿ ಚುಚ್ಚುಮದ್ದು ನೀಡಿರುವ ಘಟನೆ ಇಲ್ಲಿನ ಯಾಚಾರಂ ಗ್ರಾಮದಲ್ಲಿ ನಡೆದಿದೆ.

ಈ ಕೃತ್ಯದಲ್ಲಿ ಗ್ರಾಮದ ಸರಪಂಚ್‌ ಹಾಗೂ ಇತರ ಇಬ್ಬರು ವ್ಯಕ್ತಿಗಳ ಕೈವಾಡ ಇರುವ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸ್ಟ್ರೇ ಅನಿಮಲ್‌ ಫೌಂಡೇಷನ್‌ ಆಫ್‌ ಇಂಡಿಯಾದ (ಎಸ್‌ಎಎಫ್‌ಐ) ಪ್ರಾಣಿಗಳ ಹಕ್ಕುಗಳ ಹೋರಾಟಗಾರ ಅದುಲಪುರಂ ಗೌತಮ್‌ ಅವರು ಇದಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದು, ಜನವರಿ 19ರಂದು ಶ್ವಾನಗಳಿಗೆ ವಿಷಕಾರಿ ಚುಚ್ಚುಮದ್ದು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಾಣಿಗಳ ವಿರುದ್ಧದ ದೌರ್ಜನ್ಯ (ತಡೆ) ಕಾಯ್ದೆ ಅನ್ವಯ ಹಾಗೂ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸರಪಂಚ್‌, ಕಾರ್ಯದರ್ಶಿ ಹಾಗೂ ವಾರ್ಡ್‌ ಸದಸ್ಯನ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜತೆಗೆ ದೂರಿನಲ್ಲಿ 100 ಶ್ವಾನಗಳನ್ನು ಕೊಲ್ಲಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಪ್ರಾಥಮಿಕ ತನಿಖೆಯಲ್ಲಿ 50 ಶ್ವಾನಗಳನ್ನು ಕೊಂದಿರುವುದು ಕಂಡುಬಂದಿದೆ. ಶ್ವಾನಗಳ ಕಳೆಬರಹ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

600 ಶ್ವಾನಗಳ ಹತ್ಯಾಕಾಂಡ: ಕಳವಳ

ತೆಲಂಗಾಣದ ಗ್ರಾಮೀಣ ಭಾಗದಲ್ಲಿ ಬೀದಿ ನಾಯಿಗಳನ್ನು ಕೊಲ್ಲುತ್ತಿರುವ ‍ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ಪ್ರಾಣಿ ದಯಾ ಸಂಘಟನೆಗಳ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ವಿಷಕಾರಿ ಚುಚ್ಚುಮದ್ದು ನೀಡಿ ಸುಮಾರು 600 ಶ್ವಾನಗಳನ್ನು ಕೊಲ್ಲಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

ಯಾಚಾರಂ ಗ್ರಾಮದಲ್ಲಿ 100 ಶ್ವಾನಗಳನ್ನು ಹತ್ಯೆಗೈದಿರುವುದು ಮಾತ್ರವಲ್ಲದೇ ಧರ್ಮಪುರಿ ಎಂಬಲ್ಲಿ ಪುರಸಭೆ ಕಾರ್ಮಿಕರು 50 ಶ್ವಾನಗಳಿಗೆ ವಿಷಪ್ರಾಶನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆಯೂ ಪ್ರಕರಣ ದಾಖಲಾಗಿದೆ ಎಂದು ಹೋರಾಟಗಾರ ಗೌತಮ್‌ ಹೇಳಿದ್ದಾರೆ. ಜನವರಿ 9 ರವರೆಗೆ ಹನುಮಕೊಂಡ ಜಿಲ್ಲೆಯಲ್ಲಿ 300 ಬೀದಿ ನಾಯಿಗಳನ್ನು ಕೊಂದ ಆರೋಪದ ಮೇರೆಗೆ ಇಬ್ಬರು ಮಹಿಳಾ ಸರಪಂಚ್‌ ಸೇರಿ 9 ‍ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದೂ ಅವರು ಮಾಹಿತಿ ನೀಡಿದ್ದಾರೆ.

ಜತೆಗೆ ಕಾಮರೆಡ್ಡಿ ‍ಜಿಲ್ಲೆಯಲ್ಲಿಯೂ ಜನವರಿ 12ರವರೆಗೆ ಎರಡು-ಮೂರು ದಿನಗಳಲ್ಲೇ 200 ಬೀದಿ ನಾಯಿಗಳನ್ನು ಹತ್ಯೆಗೈಯ್ಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಐವರು ಸರಪಂಚ್‌ಗಳು ಸೇರಿ 6 ಜನರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದೂ ತಿಳಿಸಿದ್ದಾರೆ.

ಭರವಸೆ ಈಡೇರಿಸಲು ಶ್ವಾನಗಳ ಹತ್ಯೆ?

ಬೀದಿ ನಾಯಿಗಳ ಹತ್ಯೆ ಪ್ರಕರಣದಲ್ಲಿ ಸರಪಂಚ್‌ ಸೇರಿದಂತೆ ಕೆಲವು ಚುನಾಯಿತ ಪ್ರತಿನಿಧಿಗಳ ಕೈವಾಡದ ಆರೋಪಗಳು ಕೇಳಿಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಸರಪಂಚ್‌ಗಳ ವಿರುದ್ಧ ಪ್ರಕರಣವೂ ದಾಖಲಾಗಿದೆ. ಕಳೆದವರ್ಷ ಡಿಸೆಂಬರ್‌ನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸುವುದಾಗಿ ಜನರಿಗೆ ನೀಡಿರುವ ಭರವಸೆ ಈಡೇರಿಸಲು ಚುನಾಯಿತ ಪ್ರತಿನಿಧಿಗಳು ಈ ಕೃತ್ಯಗಳನ್ನು ಎಸಗುತ್ತಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದ್ದು ಈ ಆಯಾಮದಲ್ಲೂ ತನಿಖೆ ನಡೆಸಬೇಕೆಂಬ ಆಗ್ರಹ ಕೇಳಿಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries