ನವದೆಹಲಿ: '2005ರಿಂದ ಜೈಲಿನಲ್ಲಿದ್ದುಕೊಂಡು 25 ವರ್ಷ ಕಳೆಯಿತು ಎಂದು ಲೆಕ್ಕ ಹಾಕಿದ್ದು ಹೇಗೆ' ಎಂದು ಭೂಗತ ಪಾತಕಿ ಅಬು ಸಲೇಂನನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿತು.
1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ದಾಳಿ ಪ್ರಕರಣದ ದೋಷಿ ಸಲೇಂನನ್ನು ಸುದೀರ್ಘ ಕಾನೂನು ಹೋರಾಟದ ಬಳಿಕ ಪೋರ್ಚುಗಲ್ 2005ರ ನವೆಂಬರ್11ರಂದು ಭಾರತಕ್ಕೆ ಗಡೀಪಾರು ಮಾಡಿತ್ತು.
ಅರ್ಜಿ ವಿಚಾರಣೆ ವೇಳೆ ಸಲೇಂ, 'ಪೋರ್ಚುಗಲ್ ಸರ್ಕಾರಕ್ಕೆ ಭಾರತ ನೀಡಿರುವ ವಾಗ್ದಾನದ ಪ್ರಕಾರ, 25 ವರ್ಷಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆಯನ್ನು ವಿಧಿಸುವಂತಿಲ್ಲ. ಭಾರತದಲ್ಲಿ ಈಗಾಗಲೇ 25 ವರ್ಷ ಜೈಲುವಾಸ ಪೂರ್ಣಗೊಳಿಸಿದ್ದೇನೆ' ಎಂದು ನ್ಯಾಯಾಲಯಕ್ಕೆ ತಿಳಿಸಿದ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ, '2005ರಿಂದ 25 ವರ್ಷಗಳನ್ನು ಲೆಕ್ಕಾಚಾರ ಹಾಕಿದ್ದು ಹೇಗೆ' ಎಂದು ಸಲೇಂ ಪರ ವಕೀಲರನ್ನು ಪ್ರಶ್ನಿಸಿದರು. ಬಳಿಕ ಸಲೇಂ ಪರ ವಕೀಲರ ವಾದವನ್ನು ಆಲಿಸಿ, ವಿಚಾರಣೆಯನ್ನು ಫೆಬ್ರುವರಿ 9ಕ್ಕೆ ಮುಂದೂಡಿದರು.
'ಸಲೇಂ ಜೈಲುವಾಸದ 25 ವರ್ಷ ಅವಧಿಯು ಇನ್ನೂ ಮುಗಿದಿಲ್ಲ' ಎಂದು ಕಳೆದ ವರ್ಷ ಜುಲೈನಲ್ಲಿ ಬಾಂಬೆ ಹೈಕೋರ್ಟ್ ಹೇಳಿತ್ತು. ಇದನ್ನು ಪ್ರಶ್ನಿಸಿ ಸಲೇಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ.

