ಮಂಜೇಶ್ವರ: ಕೇರಳದಲ್ಲಿ ಎಸ್.ಐ.ಆರ್.(ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆ ಮೂಲಕ ಹೊಸ ಚುನಾವಣಾ ಬೂತ್ ಗಳು ನಿರ್ಮಾಣವಾದ ಕಾರಣ ಕೇರಳದಾದ್ಯ0ತ ಅಧ್ಯಾಪಕರನ್ನು ಹೊಸದಾಗಿ ಬಿ.ಎಲ್.ಒ.(ಬೂತ್ ಲೆವೆಲ್ ಆಫೀಸರ್) ಗಳಾಗಿ ನೇಮಕಾತಿ ಮಾಡಲಾಗಿದೆ. ಇವರು ಎಸ್.ಐ.ಆರ್. ಪ್ರಕ್ರಿಯೆಗಳಿಗಾಗಿ ತಕ್ಷಣದಿಂದಲೇ ನಿಯೋಜಿಸಲ್ಪಟ್ಟಿದ್ದಾರೆ. ಇದರಲ್ಲಿ ಹೈಸ್ಕೂಲ್ ಅಧ್ಯಾಪಕರೂ ಒಳಗೊಂಡಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಿದ್ಧತೆಗಳು ನಡೆಯುವ ಈ ಸಮಯದಲ್ಲಿ ಪಾಠಗಳನ್ನು ಮತ್ತು ಪುನರಾವರ್ತನೆಗಳನ್ನು ಪೂರ್ತಿಗೊಳಿಸಬೇಕಾದ ಅಧ್ಯಾಪಕರು ಬಿ.ಎಲ್.ಒ.ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಅಧ್ಯಾಪಕರ ಸ್ಥಾನದಲ್ಲಿ ಬದಲಿ ನೇಮಕಾತಿಗಳನ್ನು ಶಾಲೆಗಳು ನಡೆಸುತ್ತಿಲ್ಲ. ಸೇವಾ ನಿಯಮಗಳ ಸಬೂಬುಗಳನ್ನು ಹೇಳಿ ನೇಮಕಾತಿ ನಿರಾಕರಿಸಲಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೆಲವು ಕಡೆ ಈ ಅಧ್ಯಾಪಕರು ಸ್ವಂತ ಹಣದಲ್ಲಿ ಬದಲಿ ನೇಮಕಾತಿ ಮಾಡಬೇಕೆಂದು ಒತ್ತಡ ಹೇರಲಾಗುತ್ತಿದೆ. ಒಂದು ಕಡೆ ಎಸ್.ಐ.ಆರ್. ಕರ್ತವ್ಯ ನಿರಂತರ ಮಾನಸಿಕ ಒತ್ತಡ, ಪ್ರತಿ ದಿನ ಹೆಚ್ಚುತ್ತಿರುವ ಟಾರ್ಗೆಟ್ ಮತ್ತು ಹೊಸ ಕೆಲಸಗಳು, ಮತ್ತೊಂದು ಕಡೆ ಆರ್ಥಿಕ ಹೊರೆಯನ್ನು ಅನುಭವಿಸಬೇಕಾದ ಸ್ಥಿತಿ, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉತ್ತರ ಕೊಡಬೇಕಾದ ಸ್ಥಿತಿ ಈ ಅಧ್ಯಾಪಕರನ್ನು ಮಾನಸಿಕವಾಗಿ ಜರ್ಜರಿತ ಗೊಳಿಸುತ್ತಿದೆ. ಎಲ್ಲದಕ್ಕೂ ಅಧ್ಯಾಪಕರನ್ನೇ ಹೊಣೆಗಾರರನ್ನಾಗಿ ಮಾಡಿ ವ್ಯವಸ್ಥೆಯು ಜಾಣ ತನದಿಂದ ನುಣುಚಿಕೊಳ್ಳುತ್ತಿದೆ.
ಎಸ್.ಐ.ಆರ್. ಪ್ರಕ್ರಿಯೆಗಳನ್ನು ನಡೆಸುತ್ತಿರುವ ಕಂದಾಯ ಇಲಾಖೆಯಲ್ಲಿ ಮತ್ತು ಶಿಕ್ಷಣ ಇಲಾಖೆಯಲ್ಲಿ ಅಧ್ಯಾಪಕರು ತಮ್ಮ ಸಮಸ್ಯೆಯನ್ನು ತೋಡಿಕೊಂಡು ಯಾವುದೇ ಪ್ರಯೋಜನವಾಗಿಲ್ಲ. ಅಧ್ಯಾಪಕ ಸಂಘಟನೆಗಳು, ಬಿ.ಎಲ್.ಒ. ಸಂಘಟನೆಗಳು ಸಹ ಪರಿಹಾರ ಒದಗಿಸುವತ್ತ ಉತ್ಸುಕತೆ ತೋರಿಸುತ್ತಿಲ್ಲ. ಈಗಾಗಲೇ ದೇಶದಾದ್ಯ0ತ ಎಸ್.ಐ.ಆರ್. ಪ್ರಕ್ರಿಯೆಯ ನಡುವೆ ಹಲವು ಬಿ. ಎಲ್.ಒ.ಗಳ ಜೀವವು ಬಲಿಯಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ತಕ್ಷಣವೇ ಗಮನ ಹರಿಸಬೇಕಿದೆ.
ಅಭಿಮತ:
-ದಿನದಿಂದ ದಿನಕ್ಕೆ ಬಿ.ಎಲ್.ಒ. ಕಾರ್ಯಭಾರ ಹೆಚ್ಚುತ್ತಿದೆ. ನಡುವೆ ಶಾಲೆಗೆ ತೆರಳಿ ಪಾಠ ಮಾಡಬಹುದು ಎಂದುಕೊಂಡಿದ್ದೆ. ಆದರೆ ಸಮಯ ಸಾಲುತ್ತಿಲ್ಲ. ಬೇರೆ ಅಧ್ಯಾಪಕರು ಇಲ್ಲದೇ ಮಕ್ಕಳು ಪರೀಕ್ಷೆ ಹೇಗೆ ಎದುರಿಸುವರೋ? ಗೊತ್ತಿಲ್ಲ. ನಮಗೆ ಚುನಾವಣಾ ಆಯೋಗ ಕೊಟ್ಟ ಜವಾಬ್ದಾರಿಗೆ ಮೊದಲ ಆದ್ಯತೆ ನೀಡದೇ ನಮಗೆ ವಿಧಿ ಇಲ್ಲ.
(ಓರ್ವ ಶಿಕ್ಷಕ. ಮಂಜೇಶ್ವರ)



