ಹೈದರಾಬಾದ್: 'ನರೇಗಾದ ಬದಲಿಗೆ ಜಾರಿ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಗೆ ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಕಡಿತ ಮಾಡಿರುವುದರಿಂದ ಬಡ ರಾಜ್ಯಗಳು ಇನ್ನಷ್ಟು ಕಡಿಮೆ ಹಣ ಖರ್ಚು ಮಾಡುತ್ತವೆ. ಬಡತನ ನಿರ್ಮೂಲನೆಗೆ ಇದೇನು ಸಹಕಾರಿಯಾಗಿಲ್ಲ' ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟರು.
ಹೈದರಾಬಾದ್ ಸಾಹಿತ್ಯ ಉತ್ಸವದಲ್ಲಿ ಸೋಮವಾರ ಮಾತನಾಡಿದ ಅವರು, 'ಕೇಂದ್ರವು ಕಡಿಮೆ ಅನುದಾನ ನೀಡುವುದು ನನ್ನ ಪಾಲಿಗೆ ಚಿಂತೆಗೀಡು ಮಾಡುವ ವಿಚಾರ. ಕೇಂದ್ರವೇ ಕಡಿಮೆ ಹಣ ನೀಡಿದರೆ, ಬಡ ರಾಜ್ಯಗಳು ಕಡಿಮೆ ಹಣವನ್ನೇ ಖರ್ಚು ಮಾಡುತ್ತವೆ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ನರೇಗಾ ವಿಚಾರದಲ್ಲಿಯೂ ಇದೇ ಸಮಸ್ಯೆ ಇತ್ತು' ಎಂದರು.
'ಈ ಹೊಸ ಯೋಜನೆಯು ಬಡತನ ನಿರ್ಮೂಲನೆ ಹೋರಾಟಕ್ಕೆ ಯಾವುದೇ ಕಾಣಿಕೆ ನೀಡುವುದಿಲ್ಲ. ಈ ಯೋಜನೆಯು ಇನ್ನೂ 'ಅಂತಿಮ'ಗೊಂಡಿಲ್ಲ. ಯೋಜನೆಯಲ್ಲಿ ಬದಲಾವಣೆಗಳಾಗಬಹುದು. ಯಾಕೆಂದರೆ, ಇದರ ವಿರುದ್ಧ ಸ್ವತಃ ಬಿಜೆಪಿ ಪಾಳಯದಲ್ಲಿಯೇ ದೊಡ್ಡ ಕೂಗು ಎದ್ದಿದೆ' ಎಂದು ಅಭಿಪ್ರಾಯಪಟ್ಟರು.

