ಕಾಸರಗೋಡು: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಎಣ್ಮಕಜೆಯ ಸಿಪಿಎಂ ಮುಖಂಡ, ಪ್ರಸಕ್ತ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯೊಂದರ ಶಿಕ್ಷಕ ಸುಧಾಕರನನ್ನುಸಿಪಿಎಂ ತನ್ನ ಪಕ್ಷದಿಂದ ಅಮನತುಗೊಳಿಸಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಲು ಪಕ್ಷ ಮೂರು ಮಂದಿಯ ಸಮಿತಿ ರಚಿಸಿದೆ.
1995ರಿಂದ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆಯೊಬ್ಬರಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಮಹಿಳೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ ದೂರಿನನ್ವಯ ಪಕ್ಷ ಈ ತೀರ್ಮಾನ ಕೈಗೊಂಡಿದೆ.
ಸಂತ್ರಸ್ತ ಗೃಹಿಣಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರುನೀಡಿದ್ದು, ಇದಕ್ಕೆ ಸಂಬಂಧಿಸಿ ವಿಡಿಯೋ ಹಾಗೂ ಶಬ್ದ ಸಂದೇಶ ಒಳಗೊಂಡ ಪೆನ್ಡ್ರೈವನ್ನೂ ಕಳಹಿಸಿಕೊಟ್ಟಿದ್ದಳು,
ಸಿಪಿಎಂ ಮುಖಂಡನ ಲೈಂಗಿಕ ಕಿರುಕುಳದ ಬಗ್ಗೆ ಈ ಹಿಂದೆಯೂ ಕುಂಬಳೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರೂ, ಇದನ್ನು ದಾಖಲಿಸಿಕೊಳ್ಳದೆ ಮುಚ್ಚಿಹಾಕಿರುವುದಾಗಿಯೂ ಡಿಜಿಪಿಗೆ ಕಳುಹಿಸಿದ ದೂರಿನಲ್ಲಿ ತಿಳಿಸಲಾಗಿತ್ತು.
ಸಿಪಿಎಂ ಮುಖಂಡ ಕಳೆದ 30ವರ್ಷಗಳಿಂದ ತನ್ನನ್ನು ಹಿಂಬಾಲಿಸುತ್ತಿದ್ದು, ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದನೆ. ಈ ವ್ಯಕ್ತಿ ಶಿಕ್ಷಕ ವೃತ್ತಿ ನಡೆಸುತ್ತಿರುವ ಶಾಲೆಯ ಸನಿಹದ ನನ್ನ ತಾಯಿ ನಡೆಸುತ್ತಿರುವ ಅಂಗಡಿಯಲ್ಲಿ ತನ್ನನ್ನು ಪರಿಚಯಮಾಡಿಕೊಂಡ ಆರೋಪಿ, ತನ್ನೊಂದಿಗೆ ಅತ್ಯಂತ ಸಲುಗೆಯಿಂದ ವರ್ತಿಸುತ್ತಿದ್ದನು. ಈ ಮಧ್ಯೆ ತನಗೆ ವಿವಾಹ ನೆರವೇರಿದ್ದು, ಆರೋಪಿ ನಂತರವೂ ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಾ ಬಂದಿದ್ದಾನೆ. ಪತಿಯನ್ನು ತ್ಯಜಿಸಿ ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದು, ಇದಕ್ಕೆ ಸಿದ್ಧಳಾಗದಿದ್ದಲ್ಲಿ ಪತಿಯನ್ನು ಕೊಲೆಗೈಯುವುದಾಗಿಯೂ ಬೆದರಿಕೆ ಹಾಕಿದ್ದನು. ಈತನ ಕಿರುಕುಳದಿಂದ ಬೇಸತ್ತು ಕರ್ನಾಟಕಕ್ಕೆ ವಾಸಸ್ಥಳ ಬದಲಾಯಿಸಿದರೂ, ಅಲ್ಲಿಗೂ ಆಗಮಿಸಿ ತನ್ನೊಂದಿಗೆ ಬರುವಂತೆ ಪೀಡಿಸಿದ್ದಾನೆ. ಅಶ್ಲೀಲ ಚಿತ್ರಗಳನ್ನು ಮೊಬೈಲ್ಗೆ ವಾಟ್ಸಪ್ ಮೂಲಕ ಕಳುಹಿಸಿಕೊಡುವುದಲ್ಲದೆ, ಗೂಂಡಾಗಳ ಮೂಲಕವೂ ಬೆದರಿಕೆ ಹಾಕಲಾಗಿದೆ. ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸಿ ಹೊರಬಂದಿರುವ ಈತನಿಂದ ತನಗೆ ರಕ್ಷಣೆ ನೀಡುವಂತೆ ಡಿಜಿಪಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಮಧ್ಯೆ ಸುಧಾಕರ್ ತನ್ನ ಪಂಚಾಯಿತಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವಂತೆ ಬಿಜೆಪಿ ಎಣ್ಮಕಜೆ ಪಂಚಾಯಿತಿ ಸಮಿತಿ ಪೆರ್ಲ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.


