ಮಂಜೇಶ್ವರ: ಸಹಕಾರಿ ಪಿಂಚಣಿದಾರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಮುಂದಿಟ್ಟು ಕೇರಳ ಕೋ-ಆಪರೇಟಿವ್ ಸರ್ವೀಸ್ ಪೆನ್ಷನರ್ಸ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅನಿಧಿಷ್ಟಾವಧಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಇದರ ಭಾಗವಾಗಿ ರಾಜ್ಯ ಸಮರ ಪ್ರಚಾರ ವಾಹನ ಜಾಥಾಕ್ಕೆ ಕಾಸರಗೋಡು ಜಿಲ್ಲಾ ಉದ್ಘಾಟನೆ ಗುರುವಾರ ಹೊಸಂಗಡಿಯಲ್ಲಿ ನಡೆಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮುಂಡೂರು ರಾಮಕೃಷ್ಣನ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಎ.ಎಂ. ಮೇರಿ ಟೀಚರ್ ಜಾಥಾ ಉದ್ಘಾಟಿಸಿದರು. ಸಹಕಾರ ಜನತಾಂತ್ರಿಕ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ. ನೀಲಕಂಠನ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಯು.ಕೆ. ಸೈಫುಲ್ಲ ತಂಙಳ್, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಯಾದವ ಬಡಾಜೆ, ಸಂಘಟನೆಯ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್ ಶುಭಾಶಂಸನೆಗೈದರು. ಸಂಘಟನೆಯ ಅಧ್ಯಕ್ಷ ಸಿ.ವಿ. ನಾರಾಯಣನ್ ಹಾಗೂ ಕಾರ್ಯದರ್ಶಿ ಎಂ. ವಿಜಯನ್ ಉಪಸ್ಥಿತರಿದ್ದರು.
2021 ರಿಂದ ಸ್ಥಗಿತಗೊಂಡ 10 ಶೇಕಡಾ ಭತ್ತೆ ಪುನರ್ಸ್ಥಾಪನೆ, ಪಿಂಚಣಿ ಪರಿಷ್ಕರಣೆ, 15 ಶೇಕಡಾ ಮಧ್ಯಂತರ ಭತ್ತೆ, ವೈದ್ಯಕೀಯ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ನಾಯಕರು ಆಗ್ರಹಿಸಿದರು. ಫೆಬ್ರವರಿ 9 ರಿಂದ 17ರ ವರೆಗೆ ತಿರುವನಂತಪುರಂನಲ್ಲಿ ರಿಲೇ ಸತ್ಯಾಗ್ರಹ ಹಾಗೂ ಫೆಬ್ರವರಿ 23 ರಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಸಂಬಂಧ ಪಟ್ಟವರು ತಿಳಿಸಿದ್ದಾರೆ.

.jpg)
