HEALTH TIPS

ನಟಿ ಪ್ರತ್ಯೂಷಾ ಸಾವಿನ ಕೇಸ್‌: 23 ವರ್ಷಗಳ ಬಳಿಕ ಬಂತು ತೀರ್ಪು! ನ್ಯಾಯ ಸಿಕ್ಕಿತೆ?

ನವದೆಹಲಿ: 2002 ರಲ್ಲಿ ದಕ್ಷಿಣ ಭಾರತದಲ್ಲಿ ವ್ಯಾಪಕ ಸದ್ದು ಮಾಡಿದ್ದ ನಟಿ ಪ್ರತ್ಯೂಷಾ ಸಾವಿನ ಕೇಸ್‌ ಬಗ್ಗೆ ನಿನ್ನೆ ಸುಪ್ರೀಂ ಕೋರ್ಟ್‌ ತೀರ್ಪೊಂದನ್ನು ನೀಡಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ 2011 ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ನಿಂದ 2 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡಕ್ಕೆ ಗುರಿಯಾಗಿದ್ದ ಗುಡಿಪಲ್ಲಿ ಸಿದ್ಧಾರ್ಥ್ ರೆಡ್ಡಿಯ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸಿದ್ಧಾರ್ಥ್ ರೆಡ್ಡಿ ಎಲ್ಲಿಯೇ ಇದ್ದರೂ ನಾಲ್ಕು ವಾರಗಳಲ್ಲಿ ಪೊಲೀಸರ ಎದುರು ಶರಣಾಗತಿ ಆಗಬೇಕು ಎಂಬ ಆದೇಶವನ್ನು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಹಾಗೂ ಮನಮೋಹನ್ ಅವರ ಪೀಠ ಹೊರಡಿಸಿದೆ.

ಇದೇ ವೇಳೆ ಪ್ರತ್ಯೂಷಾ ಸಾವನ್ನು ಅತ್ಯಾಚಾರ, ಕೊಲೆ ಎಂದು ಪರಿಗಣಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೋರಿಕೊಂಡಿದ್ದ ಅರ್ಜಿಯನ್ನು ಸಾಕ್ಷ್ಯ ಆಧಾರಗಳ ಕೊರತೆಯಿಂದ ತಳ್ಳಿ ಹಾಕಿದೆ.

ಏನಿದು ಕೇಸ್?

ಪದವಿವರೆಗೆ ವಿದ್ಯಾಭ್ಯಾಸ ಮುಗಿಸಿ ಸೌಂದರ್ಯ, ಪ್ರತಿಭೆಯೊಂದಿಗೆ ನೂರಾರು ಕನಸುಗಳನ್ನು ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟಿದ್ದ 22 ವರ್ಷದ ಪ್ರತ್ಯೂಷಾ ನಿಧಾನವಾಗಿ ಚಿತ್ರರಂಗದಲ್ಲಿ ಬೇರೂರುತ್ತಿದ್ದರು.

ಇದೇ ವೇಳೆ ತೆಲಂಗಾಣದ ಭುವನಗಿರಿ ಮೂಲದ ಪ್ರತ್ಯೂಷಾ ಅವರಿಗೆ ಗುಡಿಪಲ್ಲಿ ಸಿದ್ಧಾರ್ಥ್ ರೆಡ್ಡಿ ಅವರ ಪರಿಚಯವಾಗಿತ್ತು. ಪರಿಚಯ ಸ್ನೇಹ-ಪ್ರೀತಿಗೆ ತಿರುಗಿತ್ತು.

ಆದರೆ, ಇವರ ಪ್ರೀತಿಗೆ ಸಿದ್ಧಾರ್ಥ್ ರೆಡ್ಡಿ ಮನೆಯವರ ವಿರೋಧವಿತ್ತು ಎನ್ನಲಾಗಿ 2002ರ ಫೆಬ್ರುವರಿ 23 ರಂದು ಹೈದರಾಬಾದ್ ಹೊರವಲಯದ ಹೋಟೆಲ್ ಒಂದರಲ್ಲಿ ಸಿದ್ಧಾರ್ಥ್ ರೆಡ್ಡಿ-ಪ್ರತ್ಯೂಷಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಪರಿಚಯಸ್ಥರು ಅಂದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಸಿದ್ಧಾರ್ಥ್ ಬದುಕುಳಿದರೆ, ಪ್ರತ್ಯೂಷಾ ಪ್ರಾಣ ಬಿಟ್ಟಿದ್ದರು.

ಇದರಿಂದ ಕಂಗಾಲಾಗಿದ್ದ ಪ್ರತ್ಯೂಷಾ ತಾಯಿ, 'ಪ್ರತ್ಯೂಷಾಳದ್ದು ಆತ್ಮಹತ್ಯೆಯಲ್ಲ, ಅತ್ಯಾಚಾರ-ಕೊಲೆ. ಸಿದ್ಧಾರ್ಥ್ ರೆಡ್ಡಿ ಹಾಗೂ ಆತನ ಸ್ನೇಹಿತರು ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ, ಬಳಿಕ ವಿಷಪ್ರಾಷನದ ನಾಟಕ ಮಾಡಿದ್ದಾರೆ' ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ಈ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿತ್ತು. ರಾಜಕೀಯ ಮುಖಂಡರ ಮಕ್ಕಳು ಪ್ರತ್ಯೂಷಾ ಸಾವಿನ ಹಿಂದೆ ಇದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿದ್ದ ಸಿಬಿಐ ನಾಂಪಲ್ಲಿ ಕೋರ್ಟ್‌ಗೆ ಚಾರ್ಚ್‌ಶೀಟ್ ಹಾಕಿತ್ತು.

ಚಾರ್ಚ್‌ಶೀಟ್‌ನಲ್ಲಿ ಸಿದ್ಧಾರ್ಥ್ ರೆಡ್ಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಹೊರತು ಅತ್ಯಾಚಾರ ಕೊಲೆ ಆಗಿಲ್ಲ ಎಂದು ತಿಳಿಸಿದ್ದರು.

ವಾದ ಪ್ರತಿವಾದ ಆಲಿಸಿದ್ದ ಸೆಷನ್ಸ್ ಕೋರ್ಟ್ ಆತ್ಮಹತ್ಯೆಗೆ ಪ್ರಚೋದನೆ ಅಡಿ ಸಿದ್ಧಾರ್ಥ್ ರೆಡ್ಡಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹60 ಸಾವಿರ ದಂಡವನ್ನು 2011 ರಲ್ಲಿ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿದ್ಧಾರ್ಥ್ ರೆಡ್ಡಿ ಆಂಧ್ರ ಪ್ರದೇಶ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಅದೇ ವೇಳೆ ಪ್ರತ್ಯೂಷಾ ತಾಯಿ ಸಹ ತಮ್ಮ ವಾದ ಸಮರ್ಥಿಸಿಕೊಂಡು ಹೈಕೋರ್ಟ್‌ಗೆ ಅರ್ಜಿ ಸಲ್ಲಿದ್ದರು. ಆದರೆ, 2011 ರಲ್ಲಿ ಹೈಕೋರ್ಟ್‌ನಲ್ಲಿ ರೆಡ್ಡಿ ಪರವಾಗಿ ತೀರ್ಪು ಬಂದಿತ್ತು. ಸಾಕ್ಷ್ಯಗಳ ಕೊರತೆಯಿಂದ ಸಿದ್ಧಾರ್ಥ್ ರೆಡ್ಡಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ 5 ವರ್ಷದ ಶಿಕ್ಷೆ ಬದಲು 2 ವರ್ಷ ಶಿಕ್ಷೆ ಹಾಗೂ ₹60 ಸಾವಿರ ದಂಡದ ಬದಲು ₹50 ಸಾವಿರ ದಂಡ ವಿಧಿಸಿ ತೀರ್ಪು ನೀಡಿತ್ತು.

ಮತ್ತೆ ಪ್ರತ್ಯೂಷಾಳ ತಾಯಿ ಆಂಧ್ರ ಪ್ರದೇಶ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಧೀರ್ಘ ವಾದ-ವಿವಾದ ಆಲಿಸಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ಅತ್ಯಾಚಾರ-ಕೊಲೆ ನಡೆದಿದೆ ಎಂದು ಹೇಳಲು ಬಲವಾದ ಸಾಕ್ಯ್ಯ ಆಧಾರಗಳು ದೊರಕಿಲ್ಲ. ಕತ್ತು ಹಿಸುಕಿ ಸಾಯಿಸಲಾಗಿದೆ ಎಂಬುದಕ್ಕೂ ಸಾಕ್ಯ್ಯ ಇಲ್ಲ. ಆದರೆ, ವಿಷ ಕುಡಿಯಲು ಸಂತ್ರಸ್ತೆಗೆ ಪ್ರೇರಿಪಿಸಿರುವುದು ಸಾಬೀತಾಗಿದೆ. ಹೀಗಾಗಿ ನಾವು ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿಯುತ್ತಿದ್ದೇವೆ. ಹೀಗಾಗಿ ನಾಲ್ಕು ವಾರದಲ್ಲಿ ಸಿದ್ಧಾರ್ಥ್ ರೆಡ್ಡಿ ಪೊಲೀಸರ ಎದುರು ಶರಣಾಗಬೇಕು ಎಂದು ತೀರ್ಪು ನೀಡಿದೆ.

ಇದೇ ವೇಳೆ ಪ್ರತ್ಯೂಷಾ ಸಾವನ್ನು ಅತ್ಯಾಚಾರ, ಕೊಲೆ ಎಂದು ಪರಿಗಣಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೋರಿಕೊಂಡಿದ್ದ ಅವರ ತಾಯಿಯ ಅರ್ಜಿಯನ್ನೂ ಸಾಕ್ಷ್ಯ ಆಧಾರಗಳ ಕೊರತೆಯಿಂದ ತಳ್ಳಿ ಹಾಕಿದೆ. ಈ ಕುರಿತು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

ನಟಿ ಪ್ರತ್ಯೂಷಾ 1998 ರಿಂದ 2002ರವರೆಗೆ ತೆಲುಗು-ತಮಿಳು ಸೇರಿದಂತೆ ಸುಮಾರು 12 ಸಿನಿಮಾಗಳಲ್ಲಿ ನಟಿಸಿದ್ದರು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ನಂತರ ಅಂದರೆ 2011ರಿಂದ ಸಿದ್ಧಾರ್ಥ್ ರೆಡ್ಡಿ ಅಜ್ಞಾತವಾಗಿಯೇ ಇದ್ದಾರೆ, ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎನ್ನಲಾಗಿದೆ. ಈಗ ಅವರು ಪೊಲೀಸರ ಮುಂದೆ ಶರಣಾಗಲಿದ್ದಾರೆಯೇ ಅಥವಾ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆಯೇ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries