ಮುಳ್ಳೇರಿಯ: ಅತಿಸೂಕ್ಷ್ಮ ಮತದಾರ ಪಟ್ಟಿ ಪರಿಕ್ಷಕರಣೆ(ಎಸ್.ಐ.ಆರ್.) ಕೇರಳದಾದ್ಯಂತ ಹಲವು ಅಡೆತಡೆ-ಗೊಂದಲಗಳ ಮಧ್ಯೆ ನಡೆದು ಅಂತಿಮ ಹಂತದತ್ತ ತಲುಪುತ್ತಿದ್ದು, ನಾಳೆ (ಶನಿವಾರ) ಕರಡು ಎಸ್.ಐ.ಆರ್. ಗೆ ಒಳಪಟ್ಟವರ ಪಟ್ಟಿ ಪ್ರಕಟಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜ್ಞಾವಂತ ನಾಗರಿಕರೊಬ್ಬರು ಜನಜಾಗೃತಿಗಾಗಿ ನಾಳೆ(ಶನಿವಾರ-ಫೆ.21) ತಮ್ಮೂರಿನಿಂದ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಪಾದಯಾತ್ರೆ ನಡೆಸುವ ಮೂಲಕ ಗಮನ ಸೆಳೆಯಲಿದ್ದಾರೆ.
ಬೆಳ್ಳೂರು ಗ್ರಾ.ಪಂ.ಯ ನೆಟ್ಟಣಿಗೆ ಸಮೀಪದ ಕೈಪಂಗಳ ನಿವಾಸಿ, ಪ್ರಗತಿಪರ ಕೃಷಿಕರೂ ಆಗಿರುವ ರಾಜಗೋಪಾಲ ಎಂಬವರು ಬೆಳ್ಳೂರು ಗ್ರಾ.ಪಂ. ಕಾರ್ಯಾಲಯದ ಮುಂದಿನಿಂದ ನಾಳೆ ಬೆಳಿಗ್ಗೆ 10 ರಿಂದ ಕಾಸರಗೋಡು ಜಿಲ್ಲಾಧಿಕಾರಿ ಕಾರ್ಯಾಲಯ ಕಲೆಕ್ಟರೇಟ್ ಗೆ ಪಾದಯಾತ್ರೆ ನಡೆಸಲಿದ್ದಾರೆ. ಬೆಳ್ಳೂರು, ಕಾರಡ್ಕ, ಮುಳಿಯಾರ್, ಚೆಂಗಳ ಹಾಗೂ ಕಾಸರಗೋಡು ನಗರಸಭೆಗಳ ಮೂಲಕ ರಾಜಗೋಪಾಲ ಕೈಪಂಗಳ ಅವರ ಈ ಏಕಾಂಗಿ ಪಾದಯಾತ್ರೆ ನಿಜ ಪೌರನ ಕನಿಷ್ಠ ಕರ್ತವ್ಯ, ಹಕ್ಕುಗಳ ಪ್ರಾತಿನಿಧಿಕ ರೂಪವಾಗಿ ದೇಶದಾದ್ಯಂತ ಗಮನ ನೀಡಬಹುದಾದ ಮಹತ್ತರ ಕಾರ್ಯವಾಗಲಿದೆ.
ರಾಜಗೋಪಾಲ ಕೈಪಂಗಳ ಅವರು ಮೂಲತಃ ಪ್ರಗತಿಪರ ಕೃಷಿಕರಾಗಿದ್ದು, ಸಮಾಜ ಸೇವೆಯಲ್ಲೂ ಆಸಕ್ತರು. ದಶಕಗಳ ಹಿಂದೆ ಬೆಳ್ಳೂರು ಆರೋಗ್ಯ ಕೇಂದ್ರದ ಕಟ್ಟಡ ಕೆಲಸ ಪೂರ್ತಿಯಾಗಿ ಉದ್ಘಾಟಿಸದೆ ಬಾಕಿಯಾಗಿದ್ದ ಕಟ್ಟಡ ಉದ್ಘಾಟನೆಗೆ ಉಪವಾಸ ಕುಳಿತು ಪ್ರತಿಭಟಿಸಿ ಬಳಿಕ ಅಧಿಕೃತರು ತರಾತುರಿಯಲ್ಲಿ ಕಟ್ಟಡ ಉದ್ಘಾಟಿಸಲು ಕಾರಣರಾದವರು. ಕೃಷಿ ತೋಟಕ್ಕೆ ಹಂದಿ ಸಹಿತ ಕಾಡು ಪ್ರಾಣಿಗಳ ಉಪಟಳಕ್ಕೆ ಪರಿಹಾರವಾಗಿ ಪ್ರಾಣಿಗಳ ಚಲನೆಗನುಸರಿಸಿ ಬೆಳಕು ಸೂಸಿ ಬೆದರಿಸುವ ವಿಶೇಷ ಲೈಟ್ ಆವಿಷಕರಿಸಿದ್ದರು.(ಈ ಬಗ್ಗೆ ಸಮರಸ ಸುದ್ದಿ ಸಮಗ್ರ ವರದಿ ಪ್ರಕಟಿಸಿತ್ತು.)
ಅಭಿಮತ:
-ಎಸ್.ಐ.ಆರ್.ಬಗ್ಗೆ ನಾಗರಿಕರಿಗೆ ಸ್ಪಷ್ಟ ಅರಿವನ್ನು ಮೂಡಿಸುವಲ್ಲಿ ಅಧಿಕೃತರು ಸೋತಿರುವುದು ಕಂಡುಬಮದಿದೆ. ಜೊತೆಗೆ ಅಧಿಕೃತರಲ್ಲೇ ಗೊಂದಲಗಳಿದ್ದಂತಿದೆ. ಇಂದು ಕರಡು ಪಟ್ಟಿ ಪ್ರಕಟಗೊಳ್ಳುತ್ತಿದ್ದು, ಹತ್ತು ದಿನಗಳ ಪರಿಶೀಲನಾ ಸಮಯ ಮಾತ್ರ ಇರಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಜಾಗೃತನಾಗಿ ಈ ಬಗ್ಗೆ ಮುಂದುವರಿಯಲು ಪ್ರೇರೇಪಿಸುವುದಷ್ಟೇ ನನ್ನ ಪಾದಯಾತ್ರೆಯ ಉದ್ದೇಶ. ಪರಸ್ಪರ ಕೆಸರೆರಚಾಡುಡುವ ರಾಜಕೀಯ ಪಕ್ಷಗಳಿಗೆ ಜನರ ನೈಜ ಸಮಸ್ಯೆ ಪರಿಹರಿಸುವ ಪರಿವೆ ಇಲ್ಲದಿರುವುದರಿಂದ ನಾನು ಸ್ವಯಂ ಪ್ರೇರಿತನಾಗಿ ಈ ದೌತ್ಯಕ್ಕೆ ಮುಂದಡಿ ಇಡಬೇಕಾಯಿತು.
-ರಾಜಗೋಪಾಲ ಕೈಪಂಗಳ.

-RAJAGOPALA%20KAIPANGALA-side.jpg)
-RAJAGOPALA%20KAIPANGALA-side.jpg)
