ಪೆರ್ಲ: ಅಗಲಿ ದೂರಾಗಿರುವ ತಂದೆ, ತಾಯಿ ಅಥವಾ ಹಿರಿಯರನ್ನು ಸದಾ ಸ್ಮರಿಸಿಕೊಳ್ಳುವ ಜನತೆ ಸಮಾಜದಲ್ಲಿದ್ದರೆ, ಇಲ್ಲೊಂದು ಕುಟುಂಬ ತನ್ನ ತಂದೆಯ ನೆನಪಿಗಾಗಿ ಅವರು ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ಪ್ರತ್ಯೇಕವಾಗಿ ನಿರ್ಮಿಸಿದ ವೇದಿಕೆ ಮೇಲಿರಿಸಿ ಅದನ್ನು ಹೂವಿನಿಂದ ಶೃಂಗರಿಸುವ ಮೂಲ ತಂದೆಯನ್ನು ನೆನಪಿಸಿಕೊಳ್ಳುವ ಕಾರ್ಯ ನಡೆಸಿದ್ದಾರೆ.
ಮೂಲತ: ಎಣ್ಮಕಜೆ ಪಂಚಾಯಿತಿ ಪೆರ್ಲ ಸನಿಹದ ಬಜಕೂಡ್ಲು ನಿವಾಸಿ, ಪರಪ್ಪಕರಿಯಕ್ಕೆ ವಾಸ್ತವ್ಯ ಬದಲಾಯಿಸಿದ್ದ ದಿ. ಅಮ್ಮು ರೈ ಅವರ ಮಕ್ಕಳು ಈ ಆದರ್ಶ ಮೆರೆದಿದ್ದಾರೆ. ಅಮ್ಮು ರೈ ಅವರು ಕೇರಳ ತೋಟಗಾರಿಕಾ ನಿಗಮದ ಗೇರುತೋಟ ವಿಭಾಗದಲ್ಲಿಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು. ತೋಟದ ಕೆಲಸದ ಸಂದರ್ಭ ಸಂಚಾರಕ್ಕೆ ಇವರು ದೀರ್ಘ ಕಾಲದ ವರೆಗೂ ಎಂ-80 ದ್ವಿಚಕ್ರ ವಾಹನವನ್ನು ಬಳಸುತ್ತಿದ್ದರು. ವರ್ಷಗಳ ಹಿಂದೆ ಇವರು ಅಸೌಖ್ಯದಿಂದ ನಿಧನರಾದರೂ, ಮಕ್ಕಳು ಈ ವಾಹನವನ್ನು ಮಾರಾಟ ಮಾಡದೆ, ಇವರ ನೆನಪಿಗಾಗಿ ಮನೆಯಲ್ಲೇ ಶುಚೀಕರಿಸಿ ಇರಿಸಿಕೊಂಡಿದ್ದರು.
ಅಮ್ಮು ರೈ ಅವರ ಪುತ್ರ ನವೀನ್ ಅವರ ವಿವಾಹ ಸಮಾರಂಭ ಭಾನುವಾರ ನೆರವೇರಿದ್ದು, ಮಧುರಂಗಿಶಾಸ್ತ್ರಕ್ಕೂ ಮೊದಲೇ ಮನೆ ಎದುರು ಪ್ರತ್ಯೇಕ ವೇದಿಕೆ ನಿರ್ಮಿಸಿ, ಇದರ ಮೇಲೆ ವಾಹನ ನಿಲ್ಲಿಸಿ ಶೃಂಗರಿಸಿಟ್ಟಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಶೃಂಗರಿಸಿದ ಹಳೇ ಎಂ-80ವಾಹನ ಕೌತುಕಕ್ಕೆ ಕಾರಣವಾದರೆ, ಅದು ಅಮ್ಮು ರೈ ಅವರ ಮಕ್ಕಳಿಗೆ ತಮ್ಮ ತಂದೆಯ ಮೇಲಿನ ಪ್ರೀತ್ಯಾದರ ತೋರ್ಪಡಿಸುವ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿತ್ತು. ಅಮ್ಮು ರೈ ಅವರನ್ನು ಸನಿಹದಿಂದ ಬಲ್ಲವರಿಗೆ ಮತ್ತೆ ಅವರನ್ನು ನೆನಪಿಸುವ ಕೇಂದ್ರ ಬಿಂದುವೂ ಆಗಿತ್ತು.


