ಮಂಜೇಶ್ವರ: ಗಡಿ ಭಾಗವಾದ ಆನೆಕಲ್ಲಿನಲ್ಲಿ 37 ವರ್ಷಗಳ ಇತಿಹಾಸವಿರುವ ಶ್ರೀ ಓಂಕಾರ ಭಜನಾ ಮಂಡಳಿಯ ನೂತನ ಮಂದಿರದ ಕಟ್ಟಡಕ್ಕೆ ಜಗದ್ಗುರು ಶಂಕರಾಚಾರ್ಯ ತೋಟಕಾರ್ಚಾರ್ಯ ಸಂಸ್ಥಾನ ಎಡನೀರು ಮಠದ ಪೀಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿ ಹಾಗೂ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು. ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಹಾಗೂ ಗೋಪಾಲಕೃಷ್ಣ ಭಟ್ ಕಳಾಯಿ ವೈದಿಕ ವಿಧಿವಿಧಾನ ನೆರವೇರಿಸಿಕೊಟ್ಟರು. ಹಿರಿಯ ವಕೀಲ ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಒ.ಶಾಮ್ ಭಟ್ ಉಪಸ್ಥಿತರಿದ್ದರು.
ಬಳಿಕ ಜರಗಿದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀಗಳು ಹಾಗೂ ಒಡಿಯೂರು ಶ್ರೀಗಳು ಆಶೀರ್ವಚನವನ್ನಿತ್ತು ಶುಭ ಹಾರೈಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ನಿವೃತ್ತ ಅಂಚೆಪಾಲಕ ರಾಮ ನಾಯ್ಕ್ ಕುಕ್ಕಿನಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬೋಳಂತಕೋಡಿ ರಾಮ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಆನೆಕಲ್ಲು ಎ. ಯು.ಪಿ. ಶಾಲಾ ಶಿಕ್ಷಕ ರವಿಶಂಕರ್ ಎಸ್. ಸಮಾಜಕ್ಕೆ ಭಜನಾ ಮಂದಿರದ ಅವಶ್ಯಕತೆಯ ಬಗ್ಗೆ ಮಾತನಾಡಿದರು. ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಈಶ್ವರ ಭಟ್.ಎಸ್. ಅವರು ಇಂದಿನ ದಿನದಲ್ಲಿ ಮಂದಿರದ ಅವಶ್ಯಕತೆ ಬಗ್ಗೆ ತಿಳಿಸಿದರು. ಸುಬ್ರಾಯ ನಂದೋಡಿ ಇವರು ಸುಸ್ಥಿರ ಸಂಘಟನೆ ಅವಶ್ಯಕತೆ ಹಾಗೂ ಅದನ್ನು ರೂಪಿಸುವ ಬಗ್ಗೆ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಾಪಕ ಕಾರ್ಯದರ್ಶಿ ಸದಾಶಿವ್ ಭಟ್ ಆನೆಕಲ್ಲು, ಛತ್ರ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಕೃಷ್ಣ ನಾಯ್ಕ್ ಸೊಡಂಕೂರು, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಶ್ರೀನಿವಾಸ್ ನಾಯ್ಕ್ ಆನೆಕಲ್ಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಉಪಸ್ಥಿತರಿದ್ದರು. ಸುನೀತಾ ಮತ್ತು ಬಳಗದವರು ಪ್ರಾರ್ಥನೆಯನ್ನು ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ನಾರಾಯಣ ಶೆಟ್ಟಿಗಾರ್ ಬಪ್ಪಾಯಿಮೂಲೆ ಸ್ವಾಗತಿಸಿ, ಮಂದಿರದ ಕಾರ್ಯದರ್ಶಿ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ರಾಮಕೃಷ್ಣ ಭಟ್ ಸೊಡಂಕೂರು ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಸತ್ಯಪ್ರಕಾಶ್ ಆನೆಕಲ್ಲು ವಂದಿಸಿದರು. ಕಿಶೋರ್ ಮಾಸ್ತರ್ ಆನೆಕಲ್ಲು ಹಾಗೂ ನಾರಾಯಣ ಭಟ್ ಆನೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

.jpg)
.jpg)
