ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸಂಭವಿಸಿದ್ದ 24 ಮಕ್ಕಳ ಸಾವಿಗೆ ಕಾರಣ ಎಂದು ಆರೋಪಿಸಲಾಗಿದ್ದ ಒಂದು ಬ್ರ್ಯಾಂಡ್ ನ ಕೆಮ್ಮು ಸಿರಪ್ನಲ್ಲಿ ಕಲುಷಿತ ಡೈಎಥಿಲೀನ್ ಗ್ಲೈಕಾಲ್ ಇರುವುದು ಪತ್ತೆಯಾದ ನಂತರ ಈ ತಪಾಸಣೆಗಳನ್ನು ನಡೆಸಲಾಗಿತ್ತು. 'ಕೋಲ್ಡ್ರಿಫ್' ಎಂಬ ಈ ಕೆಮ್ಮು ಸಿರಪ್ ಅನ್ನು ತಮಿಳುನಾಡು ಮೂಲದ ಶ್ರೀಶನ್ ಫಾರ್ಮಸ್ಯೂಟಿಕಲ್ಸ್ ಎಂಬ ಔಷಧ ಕಂಪೆನಿ ತಯಾರಿಸಿತ್ತು.
ಮುಂಬೈನಲ್ಲಿ ಇಂಡಿಯನ್ ಫಾರ್ಮಾಸ್ಯೂಟಿಕಲ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ 11ನೇ ಜಾಗತಿಕ ಫಾರ್ಮಾಸ್ಯೂಟಿಕಲ್ಸ್ ಗುಣಮಟ್ಟ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಭಾರತೀಯ ಔಷಧ ನಿಯಂತ್ರಕ ರಾಜೀವ್ ರಘುವಂಶಿ, "ಗಂಭೀರವಾಗಿ ಪಾಲನೆಯಾಗದ ನಿಯಮಗಳ ವಿರುದ್ಧ ನಾವು ಗಂಭೀರ ಕ್ರಮಗಳನ್ನು ಕೈಗೊಂಡಿದ್ದೇವೆ. ಕೆಮ್ಮು ಸಿರಪ್ ತಯಾರಿಕೆಯಿಂದ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ತೆಗೆದುಹಾಕಲಾಗುವುದು ಎಂಬುದು ನನ್ನ ವಿಶ್ವಾಸವಾಗಿದೆ" ಎಂದು ಹೇಳಿದರು.
ಯಾವುದೇ ಕಾಲಮಿತಿಯನ್ನು ನೀಡದೆ ಕೆಮ್ಮು ಸಿರಪ್ ಉತ್ಪನ್ನಗಳ ತಯಾರಿಕೆಯಲ್ಲಿ ಕಂಡುಬಂದ ಲೋಪಗಳನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
2022ರಿಂದ ಇಲ್ಲಿಯವರೆಗೆ ಆಫ್ರಿಕಾ ಮತ್ತು ಮಧ್ಯ ಏಷ್ಯಾದಲ್ಲಿ 140ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಭಾರತದಲ್ಲಿ ತಯಾರಾದ ಕೆಮ್ಮು ಸಿರಪ್ ಗಳು ಕಾರಣ ಎಂಬ ಆರೋಪಗಳು ಕೇಳಿಬಂದ ಬಳಿಕ, ಬಹುತೇಕ ಸಣ್ಣ ತಯಾರಿಕಾ ಕಂಪೆನಿಗಳೇ ಮೇಲುಗೈ ಸಾಧಿಸಿರುವ 42 ಶತಕೋಟಿ ಡಾಲರ್ ಮೌಲ್ಯದ ಔಷಧ ತಯಾರಿಕಾ ಕ್ಷೇತ್ರದ ಮೇಲೆ ನಿಗಾ ವಹಿಸಬೇಕು ಎಂಬ ಒತ್ತಡಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಳಗಾಗಿತ್ತು. ಈ ಆರೋಪಗಳಿಂದ 'ಜಗತ್ತಿನ ಔಷಧಾಲಯ' ಎಂಬ ಭಾರತದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿತ್ತು.

