ಕಾಸರಗೋಡು; ಕಾರ್ಮಿಕರ ಮೂಲಭೂತ ಹಕ್ಕು ನಿರಾಕರಿಸುವ ರೀತಿಯ ಕಾರ್ಮಿಕ ನೀತಿ ಜಾರಿಗೆ ತರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಫೆಬ್ರವರಿ 12 ರಂದು ರಾಷ್ಟ್ರೀಯ ಮುಷ್ಕರ ನಡೆಯಲಿದ್ದು, ಸಿಐಟಿಯು, ಎಐಟಿಯುಸಿ, ಚ್ಎಂಎಸ್, ಎನ್ಎಲ್ಯು, ಐಎನ್ಎಲ್ಸಿ, ಜೆಜೆಯುಸಿ, ಮತ್ತು ಕೆಟಿಯುಸಿಯಂತಹ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಮುಷ್ಕರ ಮುನ್ನಡೆಸಲಿದೆಎಂದು ಸಿಐಟಿಯುರಾಜ್ಯ ಸಮಿತಿ ಕಾರ್ಯದರ್ಶಿ ಟಿ.ಕೆ ರಾಜನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಮುಷ್ಕರವನ್ನು ಯಶಸ್ವಿಗೊಳಿಸಲು ಸಿದ್ಧತೆ ಪೂರ್ಣಗೊಂಡಿದೆ. ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿರುವ ಲೇಬರ್ ಕೋಡ್ ಹಿಂಪಡೆಯುವುದು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಪುನಃಸ್ಥಾಪಿಸುವುದು ಸೇರಿದಂತೆ 13ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ರಾಷ್ಟ್ರೀಯ ಮುಷ್ಕರ ನಡೆಯಲಿದೆ. ಜಿಲ್ಲೆಯ 110 ಕೇಂದ್ರಗಳಲ್ಲಿ ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಮುಂತಾದ ಜನಪರ ಸಂಘಟನೆಗಳು ಒಟ್ಟುಸೇರಿ ಪ್ರತಿಭಟನಾ ಮೆರವಣಿಗೆ, ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮಣಿಮೋಹನ್, ಎಐಟಿಯು ಜಿಲ್ಲಾ ಕಾರ್ಯದರ್ಶಿ ಬಿಜು ಉಣ್ಣಿತ್ತಾನ್, ಎಚ್ಎಂಎಸ್ ರಾಜ್ಯ ಉಪಾಧ್ಯಕ್ಷ ಪಿ.ವಿ. ತಂಬಾನ್, ಎನ್ಎಲ್ಯು ಜಿಲ್ಲಾಧ್ಯಕ್ಷ ಅಬ್ದುರಹ್ಮಾನ್ ಮಾಸ್ಟರ್ ಉಪಸ್ಥಿತರಿದ್ದರು.

