ಕಾಸರಗೋಡು: ಇನ್ ಸ್ಟಾಗ್ರಾಮ್ ನಲ್ಲಿ 2.06 ಲಕ್ಷಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿದ್ದ ಸಾಮಾಜಿಕ ಮಾಧ್ಯಮದ ಯುವ ಪ್ರಭಾವಿ 'ಚಿನ್ನು ಪಾಪು' ಅವರು ಸೋಮವಾರ ಕಾಸರಗೋಡಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಆನ್ಲೈನ್ನಲ್ಲಿ 'ಚಿನ್ನು ಪಾಪು' ಎಂದು ಪರಿಚಿತರಾಗಿದ್ದ ಅವರನ್ನು ದೇಲಂಪಾಡಿ ಪಂಚಾಯತ್ ನ ಅಧೂರ್ ಮೂಲದ ರೇಷ್ಮಾ (24) ಎಂದು ಗುರುತಿಸಲಾಗಿದೆ. ಕಾಸರಗೋಡು ಪಟ್ಟಣದ ಸಮೀಪದ ಉಳಿಯತಡ್ಕದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಮಧ್ಯಾಹ್ನ ವೇಳೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರೇಷ್ಮಾ ಅವರು ಪ್ರೇಮ ವಿವಾಹವಾಗಿದ್ದರೂ, ಒಂದು ತಿಂಗಳ ಹಿಂದಷ್ಟೇ ಪತಿಯಿಂದ ವಿಚ್ಛೇದನ ಪಡೆದಿದ್ದರು. ಅವರ ನಾಲ್ಕು ವರ್ಷದ ಮಗು ಅಡೂರಿನ ಪೋಷಕರ ಮನೆಯಲ್ಲಿತ್ತು ಎಂದು ತಿಳಿದುಬಂದಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ನೆರೆಹೊರೆಯವರು ರೇಷ್ಮಾರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ʼಚಿನ್ನು ಪಾಪುʼ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು, ಗ್ರಾಮೀಣ ಜೀವನಶೈಲಿ, ಸ್ಥಳೀಯ ಆಹಾರ, ಪ್ರವಾಸಿ ಸ್ಥಳಗಳು ಹಾಗೂ ತುಳು ಭಾಷೆಯ ಕುರಿತ ವಿಚಾರಗಳ ಮೂಲಕ ಹೆಚ್ಚಿನ ಫಾಲೋವರ್ ಗಳನ್ನು ಹೊಂದಿದ್ದರು. ಸಾಮಾನ್ಯವಾಗಿ 7ರಿಂದ 10ದಿನಗಳಿಗೊಮ್ಮೆ ಕಂಟೆಂಟ್ ಗಳನ್ನು ಪೋಸ್ಟ್ ಮಾಡುತ್ತಿದ್ದರು. ಆರು ದಿನಗಳ ಹಿಂದಷ್ಟೇ ಹಂಚಿಕೊಂಡಿದ್ದ ತರಕಾರಿಯ ಕುರಿತ ಕೊನೆಯ ಪೋಸ್ಟ್ಗೆ ಸುಮಾರು 5,800 ಲೈಕ್ ಗಳು ಬಂದಿದ್ದವು.
ಅವರ ಸಾವಿನ ಸುದ್ದಿ ಸಾಮಾಜಿಕ ಮಾಧ್ಯಮ ಬಳಗದಲ್ಲೂ ಆಘಾತ ಮೂಡಿಸಿದೆ.
ಕಾರುಗಳು ಮತ್ತು ತಂತ್ರಜ್ಞಾನ ವಿಷಯಗಳಿಗಾಗಿ ಪರಿಚಿತರಾದ, ರೀಲ್ ಮಾಡುವ ಗೋಪಿಕೃಷ್ಣ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, "ಇಂತಹ ನಗುವಿನೊಂದಿಗೆ ಎಲ್ಲರೊಂದಿಗೆ ಬೆರೆಯುತ್ತಿದ್ದ ವ್ಯಕ್ತಿ ಹೀಗೆ ಹಠಾತ್ ತೆರಳಿರುವುದು ಅರ್ಥವಾಗುತ್ತಿಲ್ಲ" ಎಂದು ಪೋಸ್ಟ್ ಮಾಡಿದ್ದಾರೆ.
ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಮರಣೋತ್ತರ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಮನಿಸಿ: ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವಲ್ಲ. ಮಾನಸಿಕ ಒತ್ತಡ ಅಥವಾ ಹತಾಶೆ ಅನುಭವಿಸುತ್ತಿರುವವರು ಸಹಾಯ ಪಡೆಯಬೇಕು. ದಿಶಾ ಸಹಾಯವಾಣಿ: 1056 / 0471-2552056 ಟೆಲಿಮಾನಸ್: 14416

