ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಕುಂಬಳೆಯ ಆರಿಕ್ಕಾಡಿಯಲ್ಲಿ ಸ್ಥಾಪಿಸಿದ ಟೋಲ್ ಪ್ಲಾಜಾ ರದ್ದುಪಡಿಸಲು ಬಿಜೆಪಿಯ ಅವಿರತ ಪರಿಶ್ರಮ ಕಾರಣ ಎಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್ ಅಶ್ವಿನಿ ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರಿಕ್ಕಾಡಿಯಲ್ಲಿ ಟೋಲ್ ಪ್ಲಾಜಾ ಆರಂಭಿಸುವುದನ್ನು ಬಿಜೆಪಿ ಈ ಹಿಂದೆಯೇ ವಿರೋಧ ಸೂಚಿಸುತ್ತಾ ಬಂದಿದೆ. ಹೆದ್ದಾರಿ ಪ್ರಾಧಿಕಾರದ ಕೆಲವು ಅಧಿಕಾರಿಗಳ ಸ್ವಾರ್ಥ ಕಾರಣಕ್ಕೆ ಇಲ್ಲಿ ಟೋಲ್ ಪ್ಲಾಜಾ ಅಳವಡಿಸಲು ಮುಂದಾಗಿದ್ದು, 60ಕಿ.ಮೀ ವ್ಯಾಪ್ತಿಯೊಳಗೆ ಮತ್ತೊಂದು ಟೋಲ್ಪ್ಲಾಜಾ ಆರಂಭಿಸುವುದಕ್ಕೆ ಬಿಜೆಪಿ ತನ್ನ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿಯ ಅವಿರತ ಪ್ರಯತ್ನದ ಫಲವಾಗಿ ಟೋಲ್ ಪ್ಲಾಜಾ ರದ್ದಾಗಿರುವುದು, ಹೊರತು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ನಡೆಸಿದ ಟೋಲ್ ವಿರೋಧಿ ಕ್ರಿಯಾ ಸಮಿತಿಯ ಹೋರಾಟದಿಂದಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದ ಟೋಲ್ ಪ್ಲಾಜಾ, ಕಾನೂನು ಉಲ್ಲಂಘಿಸಿ ನಿರ್ಮಿಸಿದ ಟೋಲ್ ಗೇಟ್ ಆಗಿದ್ದು, ಇದರಿಂದ ಜನರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಕೇಂದ್ರ ಸಾರಿಗೆ ಇಲಾಖೆಗೆ ಅಧಿಕೃತವಾಗಿ ಮನವರಿಕೆ ಮಾಡಿತ್ತು
ಅಲ್ಲದೇ ಟೋಲ್ಗೇಟ್ ರದ್ದು ಪಡಿಸಲು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗಿದೆ. ಬಿಜೆಪಿಯ ಮಂಡಲ ಅಧ್ಯಕ್ಷರುಗಳಿಂದ ತೊಡಗಿ, ರಾಜ್ಯ ಘಟಕದ ವರೆಗಿನ ನೇತಾರರು ಈ ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಬಿಜೆಪಿ ಮಂಡಲ ಸಮಿತಿ, ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿ ಮುಖಂಡರ ಮಧ್ಯಸ್ಥಿಕೆಯಿಂದ ಆರಿಕ್ಕಾಡಿ ಟೋಲ್ ಗೇಟ್ ರದ್ಧತಿ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನಕೈಗೊಂಡಿದೆ ಹೊರತು ಕ್ರಿಯಾಸಮಿತಿಯ ಗೂಂಡಾವರ್ತನೆ, ಸಾರ್ವಜನಿಕ ಆಸ್ತಿಪಾಸ್ತಿ ನಾಶದಿಂದ ಅಲ್ಲ. ಪ್ರತಿಭಟನೆ ನಡೆಸಿ, ಅಕ್ರಮವೆಸಗಿ, ಕೇಸು ದಾಖಲಿಸಿ ಕೇವಲ ರಾಜಕೀಯ ಲಾಭಕ್ಕಾಗಿ ಸೋಗಿನ ಹೋರಾಟ ನಡೆಸಿದ ಪರಿಣಾಮ ಟೋಲ್ಗೇಟ್ ರದ್ದಾಗಿಲ್ಲ.
ಟೋಲ್ಗೇಟ್ ವಿರೋಧಿ ಪ್ರತಿಭಟನೆಯ ಕ್ರಿಯಾ ಸಮಿತಿ ರಚಿಸುವ ಸಂದರ್ಭ ಬಿಜೆಪಿಯನ್ನು ಆ ಸಭೆಗೆ ಆಹ್ವಾನಿಸಿರಲಿಲ್ಲ. ಬಿಜೆಪಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೂ, ಬಿಜೆಪಿ ಆರಂಭದಿಂದಲೇ ಇದರ ವಿರುದ್ಧ ಹೋರಾಟವನ್ನು ನಡೆಸುತ್ತಲೇ ಬಂದಿದೆ. ಬಿಜೆಪಿ ಜನರ ದೂರು ಆಲಿಸಿ, ಜನರ ಪರವಾಗಿ ನಿಂತು ಮೌನವಾಗಿ ಕೆಲಸ ಮಾಡುವ ಮೂಲಕ ಗುರಿ ಸಾಧಿಸಿರುವುದಾಗಿ ಎಂ.ಎಲ್ ಅಶ್ವಿನಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪಿ.ರಮೇಶ್, ಪಿ.ಆರ್ ಸುನಿಲ್, ಮೀಡಿಯಾಸೆಲ್ನ ವೈ. ಕೃಷ್ಣದಾಸ್ ಮೊದಲಾದವರು ಉಪಸ್ಥಿತರಿದ್ದರು.

