ಕಾಸರಗೋಡು: ದಸ್ತಾವೇಜು ಬರಹಗಾರರ ಆಯ್ಕೆಗಾಗಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಸಲ್ಲಿಸಲಿರುವ ಅರ್ಜಿಯನ್ನು ಮಲಯಾಳದಲ್ಲಿ ಮಾತ್ರ ಬರೆಯಲು ಅವಕಾಶ ಕಲ್ಪಿಸಿರುವ ಸರ್ಕಾರ, ಕನ್ನಡಿಗರ ಮೇಲೆ ಮತ್ತೊಂದು ಪ್ರಹಾರ ನೀಡಿದೆ. ವಿಪರ್ಯಾಸವೆಂದರೆ, ದಸ್ತಾವೇಜು ಬರಹಗಾರರ ಆಯ್ಕೆಗಿರುವ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟಿದ್ದರೂ, ಪರೀಕ್ಷೆಗೆ ಹಾಜರಾಗಲು ಸಲ್ಲಿಸಲಿರುವ ಅರ್ಜಿಯನ್ನು ಮಲಯಾಳದಲ್ಲಿ ಮಾತ್ರ ಬರೆಯಬೇಕು. ಅದೂ ಆಯಾ ಅಭ್ಯರ್ಥಿ ತನ್ನದೇ ಕೈಬರಹದಲ್ಲಿ ಬರೆಯಬೇಕೆಂಬ ನಿಬಂಧನೆಯನ್ನು ಹಾಕುವ ಮೂಲಕ ವ್ಯವಸ್ಥಿತವಾಗಿ ಕನ್ನಡಿಗರನ್ನು ಪರೀಕ್ಷೆಯಿಂದ ಹೊರತುಪಡಿಸುವ ಪ್ರಯತ್ನವನ್ನು ಸರ್ಕಾರ ನಡೆಸುತ್ತಿದೆ.
ರಾಜ್ಯವ್ಯಾಪಕವಾಗಿ ಸೆ. 12ರಂದು ನಡೆಯಲಿರುವ ಲಿಖಿತ ಪರೀಕ್ಷೆಗಾಗಿ ಅರ್ಜಿ ಸಲ್ಲಿಕೆಗೆ ಫೆ.21ಕೊನೇ ದಿನಾಂಕವಾಗಿರುತ್ತದೆ. ಮಲಯಾಳ, ಕನ್ನಡ, ತಮಿಳು ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದರೂ, ಅರ್ಜಿ ನಮೂದಿಸಲು ಕನ್ನಡ ಯಾ ಇಂಗ್ಲಿಷ್ ಭಾಷೆಯಲ್ಲಿ ಅವಕಾಶ ಮಾಡಿಕಡದಿರುವುದು ಭಾಷಾ ಅಲ್ಪಸಂಖ್ಯಾತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕನ್ನಡ, ಆಂಗ್ಲ ಭಾಷೆ ಹೊರತುಪಡಿಸಿ ಇತರ ಭಾಷೆಗಳಲ್ಲಿ ಅಭ್ಯರ್ಥಿ ತನ್ನದೇ ಕೈಬರಹದಲ್ಲಿ ಅರ್ಜಿ ನಮೂನೆ ಪೂರ್ತಿಗೊಳಿಸಬೇಕೆಂಬ ನಿಬಂಧನೆಯನ್ನು ನೋಂದಾವಣಾ ಇನ್ಸ್ಪೆಕ್ಟರ್ ಜನರಲ್ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ತಿರುವನಂತಪುರದ ನೋಂದಾವಣಾ ಕಚೇರಿಯಲ್ಲಿ ಕನ್ನಡಬಲ್ಲ ಅಧಿಕಾರಿಗಳು ಲಭ್ಯವಿಲ್ಲದಿರುವುದರಿಂದ ಕನ್ನಡ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿಲ್ಲ ಎಂಬುದು ಇಲಾಖೆ ನೀಡುವ ಉತ್ತರವಾಗಿದೆ.
ಕಳೆದ ಕೆಲವುವರ್ಷಗಳ ಹಿಂದೆ ನೀಲೇಶ್ವರ, ಪಯ್ಯನ್ನೂರು ವರೆಗಿನ ಉಪನೋಂದಾವಣಾ ಕಚೇರಿಗಳಲ್ಲಿ ಕನ್ನಡದಲ್ಲೇ ಬರೆದ ದಸ್ತಾವೇಜುಗಳನ್ನು ಇಂದಿಗೂ ಕಾಣಬಹುದಾಗಿದ್ದರೂ, ಕ್ರಮೇಣ ಕನ್ನಡಕ್ಕೆ ಖೊಕ್ ನೀಡುತ್ತಾ ಬರಲಾಗಿದೆ. ಪ್ರಸಕ್ತ ಕಾಸರಗೋಡು, ಬದಿಯಡ್ಕ ಹಾಗೂ ಮಂಜೇಶ್ವರದಲ್ಲಿ ಕನ್ನಡ ದಸ್ತಾವೇಜು ಬರಹಗಾರರ ಸಂಖ್ಯೆ ಹೆಚ್ಚಾಗಿದ್ದು, ಸರ್ಕಾರದ ಈ ಆದೇಶದಿಂದ ಕನ್ನಡಿಗರಿಗೆ ಸರ್ಕಾರಿ ಕೆಲಸ ಮರೀಚಿಕೆಯಾಗುವ ಹಂತ ತಲುಪಿದೆ.
ಈಗಾಗಲೇ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಪೂರ್ತಿಗೊಳಿಸಿರುವ ಅರ್ಜಿ ನಮೂನೆ ಸ್ವೀಕರಿಸುವಲ್ಲಿ ಕೆಲವು ಕಚೇರಿಗಳ ಅಧಿಕಾರಿಗಳು ಹಿಂದೇಟು ಹಾಕಿರುವ ಬಗ್ಗೆ ದೂರು ಕೇಳಿಬರಲಾರಂಭಿಸಿದೆ. ಕನ್ನಡದಲ್ಲೇ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡುವಂತೆ 'ಕಾಸರಗೋಡು ಕನ್ನಡಿಗರು' ಸಂಘಟನೆಯ ಜಯನಾರಾಯಣ ತಾಯನ್ನೂರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕನ್ನಡಿಗರಿಗೆ ಅತಂತ್ರ ಸ್ಥಿತಿ:
ಕಾಸರಗೋಡಿನ ಕನ್ನಡಿಗರು ಇಲ್ಲಿನ ಮೂಲ ನಿವಾಸಿಗಳಾಗಿದ್ದು, ತಲೆಮಾರುಗಳಿಂದ ಕನ್ನಡವನ್ನೇ ಉಸಿರಾಗಿಸಿಕೊಂಡಿರುವ ಕನ್ನಡಿಗರಿಗೆ ಅರ್ಜಿ ಸಲ್ಲಿಕೆಗೆ ಮಲಯಾಳವನ್ನೇ ಆಯ್ಕೆಮಾಡಿಕೊಳ್ಳಬೇಕೆಂಬ ಸರ್ಕಾರದ ಧೋರಣೆ ಕನ್ನಡಿಗರಲ್ಲಿ ವ್ಯಾಪಕ ಅಸಮಧಾನಕ್ಕೆ ಕಾರಣವಾಗಿದೆ. ಕಾಸರಗೋಡಿನ ಕನ್ನಡಿಗರಿಗೆ ಸಂವಿಧಾನಾತ್ಮಕವಾಗಿ ಮಂಜೂರುಗೊಳಿಸಿರುವ ಸವಲತ್ತುಗಳನ್ನು ಸರ್ಕಾರ ಸಂಪೂರ್ಣ ಗಾಳಿಗೆ ತೂರುತ್ತಿದ್ದು, ಕನ್ನಡಿಗರ ಮೇಲೆ ಸರ್ಕಾರ ಸವಾರಿ ನಡೆಸುವುದನ್ನು ಕೈಬಿಡಬೇಕು ಎಂಬುದಾಗಿ ಕನ್ನಡಪರ ಹೋರಾಟಗಾರರು ತಿಳಿಸುತ್ತಾರೆ.
--



