ಪೆರ್ಲ: ತೆಂಕು ತಟ್ಟಿನ ಏಕೈಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರವಾಗಿರುವ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 21ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಕ್ಕಳ ಯಕ್ಷಗಾನ ಬಯಲಾಟ ಫೆ. 28 ಹಾಗೂ ಮಾ. 1ರಂದು ಕೇಂದ್ರದ ವಠಾರದಲ್ಲಿ ಜರಗಲಿದೆ.
28ರಂದುಬೆಳಗ್ಗೆ 9ಕ್ಕೆ ಶ್ರೀ ಮಹಾಗಣಪತಿ ಹೋಮ, ಭಜನೆ, 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 10.30ಕ್ಕೆ ಯಕ್ಷಗಾನ ವೈಭವ ನಡೆಯುವುದು. ಮಧ್ಯಾಹ್ನ 1.30ಕ್ಕೆ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, 2.30ರಿಂದ ನಿರಂತರ ಯಕ್ಷಗಾನ ಬಯಲಾಟ, ಸಂಜೆ 6ಕ್ಕೆ ಶ್ರೀ ದುರ್ಗಾಪೂಜೆ ನಡೆಯುವುದು.
ಮಾ. 1ರಂದು ಬೆಳಗ್ಗೆ 9.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಕೇಂದ್ರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸಭಾ ಭವನದ ನಿಧಿ ಸಂಗ್ರಹಕ್ಕೆ ಚಾಲನೆ ನೀಡುವರು. ಡಾ. ಎಸ್.ಎನ್ ಭಟ್ ಪೆರ್ಲ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ಬೆಳ್ಳಾರೆ ಮಂಜುನಾಥ ಭಟ್ ಅವರಿಗೆ 'ಪಡ್ರೆ ಚಂದು' ಪ್ರಶಸ್ತಿ, ಪ್ರಸಿದ್ಧ ಭಾಗವತ ಮೋಹನ ಬೈಪಡಿತ್ತಾಯ ಅವರಿಗೆ 'ತೆಂಕಬೈಲು' ಪ್ರಶಸ್ತಿ, ಪ್ರಸಿದ್ಧ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಅವರಿಗೆ'ಚೇವಾರು'ಪ್ರಶಸ್ತಿ, ಪ್ರಸಿದ್ಧ ಸ್ತ್ರೀವೇಷಧಾರಿ ಎಂ.ಕೆ ರಮೇಶ ಆಚಾರ್ಯ ಅವರಿಗೆ ಪುಂಡಿಕಾಯಿ ಪ್ರಶಸ್ತಿ, ಪ್ರಸಿದ್ಧ ಮದ್ದಳೆಗಾರ ಪೆರುವಾಯಿ ಕೃಷ್ಣ ಭಟ್ ಅವರಿಗೆ ತಲೆಂಗಳ ಭಾಗವತ ಪ್ರಶಸ್ತಿ, ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್ ದಾಸಪ್ಪ ರೈ ಅವರಿಗೆ ಅಡ್ಕಸ್ಥಳ ಪ್ರಶಸ್ತಿ, ಯಕ್ಷಗಾನ ಕಲಾವಿದ ಮಾಡಾವು ಕೊರಗಪ್ಪ ರೈ ಅವರಿಗೆ'ಮಾಯಿಲೆಂಗಿ'ಪ್ರಶಸ್ತಿ, ಪ್ರಸಾದನ ತಜ್ಞ, ಕಲಾವಿದ ಜನಾರ್ದನ ಬದಿಯಡ್ಕ ಅವರಿಗೆ'ದೇವಕಾನ'ಪ್ರಶಸ್ತಿ, ಪ್ರಸಿದ್ಧ ಯಕ್ಷಗಾನ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್ ಮತ್ತು ಪ್ರಸಿದ್ಧ ಅರ್ಥಧಾರಿ ಬೆಳ್ಳಾರೆ ರಾಮ ಜೋಯಿಸ ಅವರಿಗೆ ಶಾರದಾ ಮಹೋತ್ಸವ ರಜತ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕೇಂದ್ರದ ವಿದ್ಯಾರ್ಥಿಗಳು, ಗುರುಗಳ ಆಹ್ವಾನಿತ ಶಿಷ್ಯರ ತಂಡ ಮತ್ತು ಅತಿಥಿ ಕಲಾವಿದರಿಂದ ಮಧ್ಯಾಹ್ನ 1ರಿಂದ ಪೂರ್ವರಂಗ ಮತ್ತು ಮಧ್ಯಾಹ್ನ 2ರಿಂದ ಯಕ್ಷಗಾನ ಬಯಲಾಟ ನಡೆಯುವುದು.





