ಮುಳ್ಳೇರಿಯ: ಗೋಟಡಕೆ ಸಾಗಿಸುತ್ತಿದ್ದ ಮಾರುತಿ ಆಮ್ನಿ ವಾಹನವೊಂದು ಬೆಳ್ಳೂರು ಪಂಚಾಯಿತಿ ಕಲ್ಲಗ ತಿರುವಿನಲ್ಲಿ ಮನೆ ಮೇಲೆ ಮಗುಚಿ ಬಿದ್ದಿದ್ದು, ಮನೆಗೆ ಹಾಗೂ ಕಾರಿಗೆ ಹಾನಿಯುಂಟಾಗಿದೆ. ಮನೆಯೊಳಗಿದ್ದವರು ಹೊರಕ್ಕೆ ಧಾವಿಸಿರುವುದರಿಂದ ಜೀವಾಪಾಯದಿಂದ ಪಾರಾಗಿದ್ದರು. ಕಲ್ಲಗ ತಿರುವಿನ ಪರಿಶಿಷ್ಟ ಜಾತಿ 'ಉನ್ನತಿ"(ಕಾಲನಿ) ಬಳಿ ಗೂಡಂಗಡಿ ನಡೆಸುವ ಸುರೇಶ್ ಎಂಬವರ ಮನೆ ಮೇಲೆ ಕಾರು ಬಿದ್ದಿದ್ದು ಹಾನಿಯುಂಟಾಗಿರುವುದು.
ಕುಂಬ್ಡಾಜೆ ಪಂಚಾಯತಿನ ಮಾರ್ಪನಡ್ಕದಿಂದ ಓಮ್ನಿ ವಾಹನದಲ್ಲಿ ಅಡಕೆ ಹೇರಿ ಕರ್ನಾಟಕದ ಕಡೆಗೆ ಸಾಗಿಸುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತರಿಗೆ ಹೊಸ ಮನೆ ನಿರ್ಮಿಸಿಕೊಡುವಂತೆ ನಾಗರಿಕರು ಆಗ್ರಹಿಸಿದ್ದಾರೆ.



