ಬದಿಯಡ್ಕ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ, ದಕ್ಷಿಣ ಕನ್ನಡ ಜಿಲ್ಲೆ ಕಾಸರಗೋಡು ನಗರದ ವಿವಿಧ ಶಾಖೆಗಳ ಸಹಯೋಗದೊಂದಿಗೆ ಶ್ರೀ ಉಮಾಮಹೇಶ್ವರ ಕ್ಷೇತ್ರ ನಾರಂಪಾಡಿಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಜಾಗರಣೆ, ಭಜನೆ, ಶಿವಪಂಚಾಕ್ಷರಿ ಜಪ, ಮೃತ್ಯುಂಜಯ ಜಪ, ಶಿವಾಷ್ಟೋತ್ತರಶತನಾಮಾವಳಿ ಪಠಣೆ, ಪುಷ್ಪಾರ್ಚನೆ, ಏಕಾದಶ ಯೋಗ ಶಿವ ನಮಸ್ಕಾರ ಕಾರ್ಯಕ್ರಮ ನಡೆಯಿತು.
ಡಾ.ಕೇಶವ ಭಟ್ಟ ಮವ್ವಾರ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ನಾರಂಪಾಡಿ ಉಮಾಮಹೇಶ್ವರ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಾಸ್ತರ್, ಕಾರ್ಯದರ್ಶಿ ಹರಿನಾರಾಯಣ ಶಿರಂತ್ತಡ್ಕ ಹಾಗೂ ಕಾರ್ಯಕ್ರಮದ ಸಂಚಾಲಕ ವಿಶ್ವನಾಥ ಉಪಸ್ಥಿತರಿದ್ದರು.
ಬಳಿಕ ಯೋಗಬಂಧುಗಳಿಂದ ಭಜನೆ, ಕುಣಿತ ಭಜನೆ, ಮೃತ್ಯುಂಜಯ ಜಪ ಮತ್ತು ಶಿವ ಪಂಚಾಕ್ಷರಿ ಜಪದ ಜೊತೆಗೆ ಅದರ ಮಹತ್ವದ ಬಗ್ಗೆ ಉಪನ್ಯಾಸ ನೀಡಲಾಯಿತು. ಶಿವರಾತ್ರಿ ಜಾಗರಣೆಯ ಮಹತ್ವವನ್ನು ತಿಳಿಸಿಕೊಡಲಾಯಿತು. ಶಿವಾಷ್ಟೋತ್ತರ ಶತನಾಮಾವಳಿ ಪಠಣೆಯೊಂದಿಗೆ ಪುಷ್ಪಾರ್ಚನೆ ನಡೆಯಿತು. ದೇವಸ್ಥಾನ ಸ್ಥಳ ಪುರಾಣ, ಶಿವರಾತ್ರಿಯ ಪುರಾಣ ಕಥೆಗಳನ್ನು ತಿಳಿದುಕೊಂಡು ಕ್ಷೇತ್ರಕ್ಕೆ ಏಕಾದಶ ಪ್ರದಕ್ಷಿಣೆ ಹಾಕಲಾಯಿತು. ಪ್ರಾತಃ ಕಾಲದ ನಿತ್ಯಾಭ್ಯಾಸದ ಜೊತೆಗೆ ಏಕಾದಶ ಯೋಗ ಶಿವ ನಮಸ್ಕಾರವನ್ನು ಎಲ್ಲಾ ಯೋಗ ಬಂಧುಗಳು ಜೊತೆಯಾಗಿ ಮಾಡಿದರು. ಕುಮಾರಿ ನಳಿನಿ ಕಾರ್ಯಕ್ರಮ ನಿರೂಪಿಸಿದರು. ರವಿಶಂಕರ ವಂದಿಸಿದರು. ಅನ್ನಪೂರ್ಣೇಶ್ವರಿ ಮಂತ್ರದೊಂದಿಗೆ ಪ್ರಸಾದ ಸೇವಿಸಿ ಕಾರ್ಯಕ್ರಮ ಸಂಪನ್ನ ಗೊಳಿಸಲಾಯಿತು. ತೊಂಭತ್ತಕ್ಕೂ ಅಧಿಕ ಯೋಗ ಬಂಧುಗಳು ಹಾಗೂ ಸ್ಥಳೀಯರು, ಮಕ್ಕಳು ಭಾಗವಹಿಸಿದ್ದರು.

.jpg)
