1982ರಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 1984ರಲ್ಲಿ ವಿಚಾರಣಾ ನ್ಯಾಯಾಲಯ ಧನಿರಾಮ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಅದೇ ವರ್ಷ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದೀಗ 42 ವರ್ಷಗಳ ಬಳಿಕ ಅವರ ಮೇಲ್ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಅವರನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಿದೆ.
ನ್ಯಾಯಮೂರ್ತಿಗಳಾದ ಚಂದ್ರಧರಿ ಸಿಂಗ್ ಮತ್ತು ಸಂಜೀವ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ, 23 ಪುಟಗಳ ತೀರ್ಪಿನಲ್ಲಿ ಅಭಿಯೋಜಕರ ಸಾಕ್ಷ್ಯಗಳಲ್ಲಿ ಕಂಡುಬಂದ ವೈರುದ್ಧ್ಯಗಳ ಆಧಾರದ ಮೇಲೆ ತೀರ್ಪು ನೀಡಿದೆ. ಪ್ರಕರಣದಲ್ಲಿ ಉಲ್ಲೇಖಿಸಲಾದ ಇಬ್ಬರು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ನಂಬಿಕೆಗೆ ಅರ್ಹವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಜೊತೆಗೆ ಎಫ್ಐಆರ್ನಲ್ಲಿರುವ ದೋಷಗಳನ್ನು ಉಲ್ಲೇಖಿಸಿ, ಆರೋಪಗಳು ಅಸಂಭವನೀಯವಾಗಿವೆ ಎಂದು ಹೇಳಿದೆ.
ಪ್ರಕರಣದ ಮುಖ್ಯ ಆರೋಪಿ ಹಾಗೂ ಗುಂಡು ಹಾರಿಸಿದ್ದಾನೆ ಎನ್ನಲಾದ ವ್ಯಕ್ತಿ 1982ರಿಂದಲೇ ತಲೆಮರೆಸಿಕೊಂಡಿದ್ದು, ತಾರ್ಕಿಕ ಸಂಶಯಗಳಿಗೆ ಅತೀತವಾಗಿ ಆರೋಪವನ್ನು ಸಾಬೀತುಪಡಿಸಲು ಅಭಿಯೋಜಕರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

