ಕಾನ್ಪುರ: ಉತ್ತರಪ್ರದೇಶದಲ್ಲಿ ನಡೆದಿದ್ದ ಲ್ಯಾಂಬೋರ್ಗಿನಿ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಸ್ಥಳೀಯ ತಂಬಾಕು ಉದ್ಯಮಿ ಕೆ.ಕೆ.ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
₹10 ಕೋಟಿ ಮೌಲ್ಯದ ಇಟಾಲಿಯನ್ ಐಷಾರಾಮಿ ಸ್ಪೋರ್ಟ್ ಕಾರು ಲ್ಯಾಂಬೋರ್ಗಿನಿ ರೆವಾಲ್ಟೋ, ಕಳೆದ ಭಾನುವಾರ ಗ್ವಾಲ್ಟೋಲಿ ಪ್ರದೇಶದ ವಿಐಪಿ ರಸ್ತೆಯಲ್ಲಿ ಪಾದಚಾರಿಗಳಿಗೆ ಮತ್ತು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿತ್ತು.
ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದರು.
'ಘಟನೆ ನಡೆದಾಗ ಕಾರು ಚಾಲನೆ ಮಾಡುತ್ತಿದ್ದವನು ನಾನು. ಶಿವಂ ಅಲ್ಲ' ಎಂದು ಮೋಹನ್ ಲಾಲ್ ಎಂಬುವರು ಸ್ಥಳೀಯ ನ್ಯಾಯಾಲಯದ ಮುಂದೆ ಶರಣಾಗಿದ್ದರು. ಆದರೆ, ಶಿವಂ ಕಾರು ಚಾಲನೆ ಮಾಡುತ್ತಿದ್ದ ಎಂಬುದಕ್ಕೆ ತಮ್ಮ ಬಳಿ ಸಾಕ್ಷ್ಯ ಇದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದ್ದರು. ಹೀಗಾಗಿ ನ್ಯಾಯಾಲಯ ಶರಣಾಗತಿಯನ್ನು ಮಾನ್ಯ ಮಾಡಿರಲಿಲ್ಲ. ಅದಾದ ಮರು ದಿನವೇ ಉದ್ಯಮಿ ಪುತ್ರನ ಬಂಧನವಾಗಿದೆ.
'ದೆಹಲಿ ಆಸ್ಪತ್ರೆಯಲ್ಲಿ ಶಿವಂ ಚಿಕಿತ್ಸೆ ಪಡೆಯುತ್ತಿರುವುದಾಗಿ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದರು. ಆತನನ್ನು ಬಂಧಿಸಿ ಕಾನ್ಪುರಕ್ಕೆ ಕರೆತರಲಾಗಿದೆ' ಎಂದು ಡಿಸಿಪಿ ಅತುಲ್ ಶ್ರೀವಾತ್ಸವ ತಿಳಿಸಿದ್ದಾರೆ.
ಎಸಿಜೆಎಂ ನ್ಯಾಯಾಲಯದ ಮುಂದೆ ಶಿವಂ ಮಿಶ್ರಾರನ್ನು ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿದ್ದ ಇ-ರಿಕ್ಷಾ ಚಾಲಕ ಮೊಹಮ್ಮದ್ ತೌಫಿಕ್ ಎಂಬುವರು ದೂರು ದಾಖಲು ಮಾಡಿದ್ದರು.
ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯ ವೀಕ್ಷಿಸಿದ್ದ ಪೊಲೀಸರು ಅತಿವೇಗದಿಂದ ಕಾರು ಸಂಚರಿಸುತ್ತಿರುವುದನ್ನು ಪತ್ತೆ ಮಾಡಿದ್ದರು. ಅಪಘಾತಕ್ಕೀಡಾದ ಕಾರಿನ ಚಾಲಕನ ಸೀಟ್ನಿಂದ ವ್ಯಕ್ತಿಯೊಬ್ಬನನ್ನು ಖಾಸಗಿ ಭದ್ರತಾ ಸಿಬ್ಬಂದಿ ಹೊರಗೆಳೆಯುತ್ತಿದ್ದರು. ಆತ ಶಿವಂ ಮಿಶ್ರಾ. ಆತನನ್ನು ಬೇರೊಂದು ಕಾರಿನಲ್ಲಿ ಸಾಗಿಸಲಾಗಿತ್ತು ಎಂಬುದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದ ದೃಶ್ಯಗಳಲ್ಲಿ ಗೋಚರಿಸಿತ್ತು.
ಅಪರಿಚಿತ ಚಾಲಕ ಎಂದು ಮೊದಲು ಎಫ್ಐಆರ್ ದಾಖಲಿಸಿದ್ದ ಪೊಲೀಸರು ಆನಂತರ ಶಿವಂ ಮಿಶ್ರಾ ಹೆಸರನ್ನು ಎಫ್ಐಆರ್ನಲ್ಲಿ ಸೇರಿಸಿದ್ದರು.
'ನನ್ನ ಮಗ ಲ್ಯಾಂಬೋರ್ಗಿನಿ ಕಾರು ಚಾಲನೆ ಮಾಡುತ್ತಿರಲಿಲ್ಲ. ಅಪಘಾತವಾದಾಗ ಬಾಡಿಗೆ ಚಾಲಕ ಕಾರು ಓಡಿಸುತ್ತಿದ್ದರು. ಶಿವಂ ಅನಾರೋಗ್ಯ ಕಾರಣ ಚಿಕಿತ್ಸೆ ಪಡೆಯುತ್ತಿದ್ದ' ಎಂದು ಶಿವಂ ತಂದೆ ಮತ್ತು ಅವರ ಪರ ವಕೀಲರು ವಾದಿಸುತ್ತಿದ್ದಾರೆ.
ಲ್ಯಾಂಬೋರ್ಗಿನಿ ಕಾರು ಅಪಘಾತ ಪ್ರಕರಣ ಸಾಮಾಜಿಕ ಮಾಧ್ಯಮದಲ್ಲಿ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಕೆಲವರಿಗೆ ವಿಶೇಷ ಸವಲತ್ತು ಸಿಗುತ್ತಿದೆ. ಕಾನೂನು ಪಾಲನೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

