ಲೋಕಸಭೆಯಲ್ಲಿ ಪ್ರತಿಪಕ್ಷ ಸಂಸದರ ಪ್ರತಿಭಟನೆಗಳ ನಡುವೆಯೇ ಮಾತನಾಡಿದ ಗೋಯಲ್, ಕೃಷಿ ಮತ್ತು ಹೈನುಗಾರಿಕೆಯಂತಹ ಸೂಕ್ಷ್ಮ ಕ್ಷೇತ್ರಗಳ ರಕ್ಷಣೆಯನ್ನು ಖಚಿತಪಡಿಸುವಲ್ಲಿ ಸರಕಾರ ಯಶಸ್ವಿಯಾಗಿದೆ ಎಂದು ಹೇಳಿದರು.
ಒಪ್ಪಂದ ಕುರಿತು ಉಭಯ ದೇಶಗಳು ಒಮ್ಮತಕ್ಕೆ ಬರಲು ಒಂದು ವರ್ಷವೇ ಬೇಕಾಯಿತು ಮತ್ತು ಅವುಗಳ ಪ್ರಮುಖ ಕ್ಷೇತ್ರಗಳು ಕಡೆಗಣಿಸಲ್ಪಟ್ಟಿಲ್ಲ ಎಂಬುದನ್ನು ಖಾತರಿ ಮಾಡಿಕೊಳ್ಳಲಾಗಿದೆ ಎಂದು ಗೋಯಲ್ ಹೇಳಿದರು.
ಕಳೆದ ವರ್ಷ ಉಭಯ ದೇಶಗಳ ಸಂಧಾನಕಾರರು ವಿವಿಧ ಹಂತಗಳಲ್ಲಿ ವಿವರವಾದ ಚರ್ಚೆಗಳನ್ನು ನಡೆಸಿದ್ದರು. ಎರಡೂ ದೇಶಗಳು ತಮ್ಮ ಪ್ರಮುಖ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಮತ್ತು ಸೂಕ್ಷ್ಮ ವಲಯಗಳ ಸುರಕ್ಷತೆ ಹಾಗೂ ಸಾಧ್ಯವಿರುವ ಅತ್ಯುತ್ತಮ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಬಯಸುವುದು ಸಹಜ. ಚರ್ಚೆಗಳ ಸಂದರ್ಭದಲ್ಲಿ ಭಾರತವು ತನ್ನ ಸೂಕ್ಷ್ಮ ಕ್ಷೇತ್ರಗಳ, ವಿಶೇಷವಾಗಿ ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಗಳ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಂದು ವರ್ಷದ ಚರ್ಚೆಗಳ ಬಳಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ವಿವಿಧ ಕ್ಷೇತ್ರಗಳಿಗೆ ಅಂತಿಮ ರೂಪ ನೀಡುವಲ್ಲಿ ಉಭಯ ದೇಶಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.

