ಗುವಾಹಟಿ: ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹಾಗೂ ಅವರ ಪತ್ನಿ ಎಲಿಜಬೆತ್ ಕೊಲ್ಬರ್ನ್ ಅವರು, ಪಾಕಿಸ್ತಾನದ ಪ್ರಜೆ ಅಲಿ ತೌಖೀರ್ ಶೇಖ್ರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಮತ್ತು ಗುಪ್ತಚರ ಇಲಾಖೆಯಿಂದ ಮಾಹಿತಿಯನ್ನು ರಹಸ್ಯವಾಗಿ ನೆರೆಯ ರಾಷ್ಟ್ರಕ್ಕೆ ರವಾನಿಸಿದ್ದಾರೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರ್ಮಾ, 'ಎಲಿಜಬೆತ್, ಪಾಕಿಸ್ತಾನದಲ್ಲಿನ ಅಲಿ ತೌಖ್ವೀರ್ ಶೇಖ್ ಅವರ ಸಂಘಟನೆ ಲೀಡ್ ಪಾಕಿಸ್ತಾನದೊಂದಿಗೆ ಕೆಲಸ ಮಾಡುತ್ತಿದ್ದರು. ನಂತರ ಅವರನ್ನು ಭಾರತಕ್ಕೆ ವರ್ಗಾಯಿಸಲಾಯಿತು. ಮುಂದೆ ಅವರು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಅವರಿಗೆ ವೇತನವನ್ನು ಅಲಿ ತೌಖೀರ್ ಶೇಖ್ ಪಾವತಿಸುತ್ತಿದ್ದರು. ಎಲಿಜಬೆತ್ಗೆ ವೇತನ ನೀಡಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ(ಎಫ್ಸಿಆರ್ಎ) ನಿಯಮಗಳನ್ನು ಉಲ್ಲಂಘಿಸಲಾಗಿದೆ' ಎಂದು ಆರೋಪಿಸಿದರು.
'ಲೀಡ್ ಪಾಕಿಸ್ತಾನ್ ಸಂಘಟನೆ, ಹಣವನ್ನು ಲೀಡ್ ಇಂಡಿಯಾ ಸಂಸ್ಥೆಗೆ ಕಳಿಸುತ್ತಿತ್ತು. ಈ ಸಂಸ್ಥೆ, ಎಫ್ಸಿಆರ್ಎ ನಿಯಮಗಳನ್ನು ಉಲ್ಲಂಘಿಸಿ ಎಲಿಜಬೆತ್ಗೆ ಹಣವನ್ನು ನೀಡುತ್ತಿತ್ತು ಎಂದು ಆರೋಪಿಸಿದ ಶರ್ಮಾ, 'ಭಾರತ ಶತ್ರು ರಾಷ್ಟ್ರವಾಗಿರುವುದರಿಂದ ಪಾಕಿಸ್ತಾನಿ ಸಂಸ್ಥೆಗಳು ದೇಣಿಗೆ ನೀಡಲು ಸಾಧ್ಯವಿಲ್ಲ. ಬಹುಶಃ ಯುಪಿಎ ಸರ್ಕಾರದ ಅವಧಿಯಲ್ಲಿ ಎಲಿಜಬೆತ್ ಅವರಿಗೆ ಹಣ ನೀಡಲು ವಿಶೇಷ ಅನುಮತಿ ಪಡೆದಿರಬಹುದು' ಎಂದು ಅವರು ವ್ಯಂಗ್ಯವಾಡಿದರು.
'ಲೀಡ್ ಇಂಡಿಯಾದೊಂದಿಗೆ ಕೆಲಸ ಮಾಡುವಾಗ ಕೋಲ್ಬರ್ನ್ ಆರು ಬಾರಿ ಇಸ್ಲಾಮಾಬಾದ್ಗೆ ಪ್ರಯಾಣಿಸಿದ್ದಾರೆ. ಇನ್ನೊಂದು ಎನ್ಜಿಒಗೆ ಸೇರಿದ ನಂತರ ಮೂರು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಎಲಿಜಬೆತ್ ಪಾಕಿಸ್ತಾನಕ್ಕೆ ಅಟ್ಟಾರಿ ಗಡಿಯ ಮೂಲಕ ಮಾತ್ರ ಭೇಟಿ ನೀಡುತ್ತಿದ್ದರು, ಎಂದಿಗೂ ವಿಮಾನದಲ್ಲಿ ಹೋಗುತ್ತಿರಲಿಲ್ಲ' ಎಂದು ಹೇಳಿದರು.
'ಭಾರತದಲ್ಲಿ ಕಾರ್ಯನಿರ್ವಹಿಸಿದ ನಂತರ ಕೊಲ್ಬರ್ನ್ ಅವರು ಭಾರತದೊಳಗಿನ ಮಾಹಿತಿಯನ್ನು ಸಂಗ್ರಹಿಸಲಾರಂಭಿಸಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಕುರಿತು ಎಲಿಜಬೆತ್ ಅವರು ಗುಪ್ತಚರ ವಿಭಾಗದ ಮೂಲಗಳಿಂದ ಮಾಹಿತಿ ಸಂಗ್ರಹಿಸಿ, ಶೇಖ್ ಅವರಿಗೆ 45 ಪುಟಗಳ ವರದಿಯನ್ನು ಕಳುಹಿಸಿದ್ದರು' ಎಂದು ಅವರು ವಿವರಿಸಿದರು.
'ಗೌರವ್, 2013 ರಲ್ಲಿ ಗೌಪ್ಯವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಒಂದು ರೀತಿಯ ತರಬೇತಿ ಪಡೆದಿದ್ದಾರೆ. ಗೌರವ್, ಎಲಿಜಬೆತ್ ಕೊಲ್ಬರ್ನ್ ಮತ್ತು ಅಲಿ ತೌಖ್ವೀರ್ ಶೇಖ್ ನಡುವೆ ನಿಕಟ ಸಂಪರ್ಕವಿದೆ. ಎಲಿಜಬೆತ್ ಮತ್ತು ಶೇಖ್ ಅವರು ಅಂತರರಾಷ್ಟ್ರೀಯ ಸಂಚಿನ ಭಾಗವಾಗಿರಬಹುದು' ಎಂದು ಶರ್ಮಾ ದೂರಿದರು.
'ಭಾರತ ಸರ್ಕಾರದ ಅನುಮತಿ ಇಲ್ಲದೇ, ಸ್ಥಳೀಯ ಸಂಸ್ಥೆಗಳೊಂದಿಗೆ(ಮುನ್ಸಿಪಲ್ ಏಜೆನ್ಸಿ)ಕೆಲಸ ಮಾಡಿದ್ದಾರೆ. ಇದನ್ನು ಅಸ್ಸಾಂ ಪೊಲೀಸರು ತನಿಖೆ ನಡೆಸಲು ಸಾಧ್ಯವಿಲ್ಲ. ಹಾಗಾಗಿ ರಾಷ್ಟ್ರೀಯ ಸಂಸ್ಥೆಗಳಿಂದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದೇನೆ' ಎಂದು ಶರ್ಮಾ ತಿಳಿಸಿದರು.

