HEALTH TIPS

'ಭಾರತವನ್ನು ಮಾರುವ ಧೈರ್ಯ ಇರುವವರು ಯಾರೂ ಹುಟ್ಟಿಲ್ಲ, ಪ್ರಧಾನಿ ಮೋದಿ ಅಂತಹ ಕೆಲಸ ಎಂದಿಗೂ ಮಾಡುವುದಿಲ್ಲ': ನಿರ್ಮಲಾ ಸೀತಾರಾಮನ್

 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿದ್ದು, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ವಿಶ್ವ ವ್ಯಾಪಾರ ಸಂಸ್ಥೆ (WTO) ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳ ಮುಂದೆ ಭಾರತದ ಹಿತಾಸಕ್ತಿಯನ್ನು ತ್ಯಜಿಸಿ, ಬಡವರು ಮತ್ತು ರೈತರ ಹಿತಾಸಕ್ತಿಯನ್ನು ‘ಮಾರಾಟ’ ಮಾಡಿತ್ತು ಎಂದು ಆರೋಪಿಸಿದ್ದಾರೆ.

ಈ ದೇಶದ ಬಡವರು ಮತ್ತು ರೈತರ ಹಿತಾಸಕ್ತಿಯಷ್ಟೇ ಅಲ್ಲ, ಇಡೀ ದೇಶದ ಹಿತಾಸಕ್ತಿಯನ್ನೇ ಕಾಂಗ್ರೆಸ್ ಹಾನಿಗೊಳಿಸಿತು ಎಂದು ಟೀಕಿಸಿದ್ದಾರೆ.


ತಮ್ಮ ಸಚಿವ ಸಂಪುಟ ಸಹೋದ್ಯೋಗಿ ಕಿರಣ್ ರಿಜಿಜು ಅವರ ಮಾತುಗಳನ್ನು ಬೆಂಬಲಿಸಿ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಸದನದಲ್ಲಿ, “ಕೋಯಿ ಮೈ ಕಾ ಲಾಲ್ ಪೈದಾ ನಹೀಂ ಹುವಾ ಜೋ ಹಮಾರೆ ದೇಶ್ ಕೋ ಬೇಚ್ ದೇ ಯಾ ಖರೀದ ಲೇ” (ನಮ್ಮ ದೇಶವನ್ನು ಮಾರಲು ಅಥವಾ ಖರೀದಿಸಲು ಯಾರಿಗೂ ಧೈರ್ಯವಿಲ್ಲ) ಎಂದು ಹೇಳಿದರು.

ಇದೇ ವೇಳೆ, ಶರ್ಮ್ ಎಲ್-ಶೇಖ್ ಸಂಯುಕ್ತ ಪ್ರಕಟಣೆಯನ್ನು ಉಲ್ಲೇಖಿಸಿದ ಅವರು, ಪಾಕಿಸ್ತಾನದೊಂದಿಗೆ ನಡೆದ ಮಾತುಕತೆಯಲ್ಲಿ ಹಿಂದಿನ ಸರ್ಕಾರವು ಭಾರತದ ಸಾರ್ವಭೌಮತ್ವ ಮತ್ತು ಭದ್ರತೆ ಕುರಿತ ತನ್ನ ನಿಲುವನ್ನು ದುರ್ಬಲಗೊಳಿಸಿತ್ತು ಎಂದು ಆರೋಪಿಸಿದರು.

ಶರ್ಮ್ ಎಲ್-ಶೇಖ್‌ನಲ್ಲಿ ಪಾಕಿಸ್ತಾನ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದವರು ಈಗ ನಮಗೆ ಮಾತುಕತೆ ಕುರಿತು ಸಲಹೆ ನೀಡುತ್ತಿದ್ದಾರೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್, “ಸರ್ಕಾರ, ರೈತರು, ಬಡವರು ಮತ್ತು ದೇಶದ ಹಿತಾಸಕ್ತಿಯನ್ನು ಮಾರಾಟ ಮಾಡಿದವರು ಕಾಂಗ್ರೆಸ್‌ವೇ. ಭಾರತವನ್ನು ಪಾಕಿಸ್ತಾನಕ್ಕೆ ಸಮಾನವಾಗಿ ತೂಗಿದವರೂ ನೀವೇ ಎಂದು ವಿರೋಧ ಪಕ್ಷದವರತ್ತ ಕೈ ತೋರಿಸಿ ಆರೋಪಿಸಿದರು.

ಕಿರಣ್ ರಿಜಿಜು ಅವರು ಸರಿಯಾಗಿ ಹೇಳಿದ್ದಾರೆ. ಇಂದಿನವರೆಗೆ ಭಾರತವನ್ನು ಮಾರುವಂತಹ ಒಬ್ಬರೂ ಹುಟ್ಟಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಇಂತಹ ಕೆಲಸವನ್ನು ಎಂದಿಗೂ ಮಾಡುವುದಿಲ್ಲ ಎಂದು ಹೇಳಿದರು.

ಲೋಕಸಭೆಯಲ್ಲಿ 2026-27ರ ಕೇಂದ್ರ ಬಜೆಟ್ ಕುರಿತು ನಡೆದ ಚರ್ಚೆಗೆ ಪ್ರತಿಕ್ರಿಯಿಸುತ್ತಾ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ WTO ಸಭೆಯಲ್ಲಿ ಭಾರತವು ‘ಶಾಂತಿ ವಿಧಾನ’ (Peace Clause) ವಿಷಯದಲ್ಲಿ ಸಮರ್ಪಣೆ ಮಾಡಿಕೊಂಡಿತ್ತು ಎಂದು ಆರೋಪಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಸದಾ ಭಾರತದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಕಾರ್ಯನಿರ್ವಹಿಸುತ್ತಾರೆ ಎಂದು ಹೇಳಿದ ಅವರು, 2013ರಲ್ಲಿ ಬಾಲಿ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಕಾಂಗ್ರೆಸ್ ಸರ್ಕಾರವು Wಖಿಔ ಮುಂದೆ ಶರಣಾಗಿ, ಬಡವರು ಮತ್ತು ರೈತರ ಹಿತಾಸಕ್ತಿಯನ್ನು ಹಾನಿಗೊಳಿಸಿತು ಎಂದು ಹೇಳಿದರು. ಈ ಒಪ್ಪಂದದಲ್ಲಿ ವ್ಯಾಪಾರ ಸುಗಮತೆ ಒಪ್ಪಂದ (TFA) ಮತ್ತು ಸಾರ್ವಜನಿಕ ಧಾನ್ಯ ಸಂಗ್ರಹಣೆ (ಆಹಾರ ಭದ್ರತೆ) ಎಂಬ ಎರಡು ಪ್ರಮುಖ ಅಂಶಗಳಿದ್ದವು.

ಡೇಟಾ ಭದ್ರತೆ ಕುರಿತು ಆತಂಕಕ್ಕೆ ಉತ್ತರ

ಕೃತಕ ಬುದ್ಧಿಮತ್ತೆ (ಂI) ಮತ್ತು ಡೇಟಾ ಭದ್ರತೆ ಕುರಿತು ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದ ಆತಂಕವನ್ನು ತಳ್ಳಿ ಹಾಕಿದ ಅವರು, “ಡೇಟಾ ಭಾರತದಲ್ಲೇ ಸಂಗ್ರಹವಾಗುವಂತೆ ಕ್ಲೌಡ್ ಮತ್ತು ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲು ನಾವು ಪ್ರೋತ್ಸಾಹ ನೀಡುತ್ತಿದ್ದೇವೆ. ಇದರಿಂದ ನಮ್ಮ ಯುವಜನತೆಗೆ ಉದ್ಯೋಗಾವಕಾಶಗಳೂ ಸಿಗುತ್ತವೆ ಎಂದು ಹೇಳಿದರು.

2026-27ನೇ ಸಾಲಿಗೆ ಇಂಡಿಯಾ ಎಐ ಮಿಷನ್‌ಗೆ 1,000 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಹೇಳಿದರು.

ಶಕ್ತಿ ಮತ್ತು ಹಣಕಾಸಿನ ‘ಅಸ್ತ್ರೀಕರಣ’ಕ್ಕೆ ತಡೆ ನೀಡಲು ಬಜೆಟ್‌ನಲ್ಲಿ ಸೂಕ್ತ ಅನುದಾನಗಳನ್ನು ಈಗಾಗಲೇ ನೀಡಲಾಗಿದೆ. ಆದರೆ ವಿರೋಧ ಪಕ್ಷದ ನಾಯಕರು ಬಜೆಟ್ ದಾಖಲೆಗಳನ್ನು ಪೂರ್ಣವಾಗಿ ಓದದೇ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಅವರು ಆರೋಪಿಸಿದರು.

ಭೌಗೋಳಿಕ ರಾಜಕೀಯ, ಇಂಧನ ಮತ್ತು ಹಣಕಾಸಿನ ಅಸ್ತ್ರೀಕರಣ ಕುರಿತು ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದರೂ, ಈ ಸವಾಲುಗಳನ್ನು ಎದುರಿಸಲು ಬಜೆಟ್‌ನಲ್ಲಿ ಘೋಷಿಸಿದ ಕ್ರಮಗಳನ್ನು ಅವರು ಗಮನಿಸಿಲ್ಲ ಎಂದು ಹೇಳಿದರು.

ಜಾಗತಿಕ ಅನಿಶ್ಚಿತತೆಗಳಿಂದ ಉಂಟಾಗುವ ಅನಿರೀಕ್ಷಿತ ವೆಚ್ಚಗಳನ್ನು ನಿರ್ವಹಿಸಲು ‘ಆರ್ಥಿಕ ಸ್ಥಿರೀಕರಣ ನಿಧಿ’ಗೆ ಹಣ ವರ್ಗಾಯಿಸಿರುವುದರಿಂದ ವೆಚ್ಚದಲ್ಲಿ ಬದಲಾವಣೆಗಳಿವೆ ಎಂದು ಬಜೆಟ್ ವಿವರಿಸುತ್ತದೆ. ಪ್ರಸ್ತುತ 2025-26 ಹಣಕಾಸು ವರ್ಷಕ್ಕೆ ಈ ನಿಧಿಗೆ 50,000 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ಹೇಳಿದರು.

ತಂತ್ರಜ್ಞಾನ ಮತ್ತು ಹಣಕಾಸಿನ ಅಸ್ತ್ರೀಕರಣವನ್ನು ಎದುರಿಸಲು ಈ ಹೊಸ ನಿಧಿಗೆ ₹9,800 ಕೋಟಿ ಅನುದಾನ ನೀಡಲಾಗಿದೆ ಎಂದು ಅವರು ಹೇಳಿದರು.

ಶಕ್ತಿ ಕ್ಷೇತ್ರದ ಅಸ್ತ್ರೀಕರಣದಿಂದ ಭಾರತವನ್ನು ರಕ್ಷಿಸಲು, ಪ್ರಮುಖ ಖನಿಜಗಳ ಸ್ವಾವಲಂಬನೆಗೆ (ಕಸ್ಟಮ್ಸ್ ಸುಂಕ ವಿನಾಯಿತಿ), ಅಣುಶಕ್ತಿ ಯೋಜನೆಗಳಿಗೆ 2,500 ಕೋಟಿ ರೂಪಾಯಿ ಅನುದಾನ ಮತ್ತು ರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಮಿಷನ್‌ಗೆ 600 ಕೋಟಿ ರೂಪಾಯಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries