ಕಾಸರಗೋಡು: ಕೇಂದ್ರ ಸರ್ಕಾರದ ವಿವಿಧ ಜನಪರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗದ ಕೇರಳದ ಎಡರಂಗ ಸರ್ಕಾರ ಹಾಗೂ ಐಕ್ಯರಂಗಕ್ಕೆ ಕೇಂದ್ರ ಬಜೆಟನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ತಿಳಿಸಿದ್ದಾರೆ.
ವಿಶ್ವಶಾಂತಿಗಾಗಿ ರಾಜ್ಯ ಬಜೆಟ್ ನಲ್ಲಿ 2 ಕೋಟಿ ರೂಪಾಯಿ ಮೀಸಲಿಟ್ಟಿರುವ ಪಿಣರಾಯಿ ವಿಜಯನ್ ಮತ್ತು ಅವರ ಸಚಿವ ಸಂಪುಟ, ತೆಂಗು ಅಭಿವೃದ್ಧಿ ಮತ್ತು ಸಮುದ್ರ ಆಮೆ ಸಂರಕ್ಷಣೆಗೆ ಹಣ ಮೀಸಲಿಟ್ಟಿರುವ ಕೇಂದ್ರ ಸರ್ಕಾರವನ್ನು ಅಣಕಿಸುತ್ತಿರುವುದು ಹಾಸ್ಯಾಸ್ಪದ. ಹಿರಿಯ ನಾಗರಿಕರಿಗೆ ಅವರ ಆದಾಯ ಮಿತಿಯನ್ನು ಲೆಕ್ಕಿಸದೆ 5 ಲಕ್ಷ ರೂ.ಗಳ ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುವ ಆಯುಷ್ಮಾನ್ ವಯೋ ವಂದನ ಯೋಜನೆಗೆ ಅಥವಾ ನಗರ ವಸತಿ ಯೋಜನೆಯ ಎರಡನೇ ಹಂತಕ್ಕೆ ಪಿಣರಾಯಿ ವಿಜಯನ್ ಸರ್ಕಾರ ಅನುಮೋದನೆ ನೀಡಿಲ್ಲ. ಸಂಕುಚಿತ ಹಿತಾಸಕ್ತಿಯ ಹೆಸರಿನಲ್ಲಿ 1200 ಕೋಟಿ ರೂ. ಮೌಲ್ಯದ 'ಪ್ರಧಾನಮಂತ್ರಿ ಶ್ರೀ' ಯೋಜನೆಯನ್ನು ಕಳೆದುಕೊಂಡಿರುವ ಕೇರಳದ ಎಡ ಮತ್ತು ಬಲ ರಂಗಗಳಿಗೆ ಕೇರಳದಲ್ಲಿ ನಿಜವಾದ ಅಭಿವೃದ್ಧಿ ಬೇಕಾಗಿಲ್ಲ. ಕೇಂದ್ರದ ಯೋಜನೆಗಳನ್ನು ಜಾರಿಗೊಳಿಸಿದಲ್ಲಿ, ಬಿಜೆಪಿಗೆ ಅದರ ಲಾಭ ಲಭಿಸಬಹುದೆಂಬ ಕೆಟ್ಟ ಯೋಚನೆಗಳಿಂದ ಉಭಯ ರಂಗಗಳು ರಾಜ್ಯದ ಹಿತಸಕ್ತಿಯನ್ನು ಬಲಿಕೊಡುತ್ತಿದ್ದು, ಪ್ರಸಕ್ತ ರಾಜಕೀಯ ವಿರೋಧದಿಂದಾಗಿ ಕೇಂದ್ರ ಬಜೆಟನ್ನು ಟೀಕಿಸುತ್ತಿರುವುದು ಖಂಡನೀಯ ಎಂದು ಎಂ.ಎಲ್ ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


