ಕಣ್ಣೂರು: ಆಚರಣೆಯ ಭಾಗವಾಗಿ ದೇವಾಲಯಗಳಿಗೆ ಭೇಟಿ ನೀಡಲು ತೆರಳಿದ್ದ ತೆಯ್ಯಂ(ತುಳು ನಾಡಿನ ಭೂತ) ಕಡೆಗೆ ಬೀದಿ ನಾಯಿಗಳ ಗುಂಪೆÇಂದು ಓಡಿ ಬಂದಾಗ, ತೆಯ್ಯಂ ಕೈ ಎತ್ತಿ, ಗಂಟೆ ಬಾರಿಸಿ ಓಡಿಸಿದ ಘಟನೆ ವರದಿಯಾಗಿದೆ. ಇದರೊಂದಿಗೆ, ಭಯಭೀತರಾದ ನಾಯಿಗಳ ಗುಂಪು ದೂರ ಸರಿದು ಓಡಿಹೋಯಿತು. ಈ ಘಟನೆ ಬುಧವಾರ ಬೆಳಗಿನ ಜಾವ ಕಣ್ಣೂರು ನಡುವಿಲಿ ಅಂಗನವಾಡಿ ಬಳಿ ನಡೆದಿದೆ.
ಇಲ್ಲಿಂದ ಎರಡು ಕಿಲೋಮೀಟರ್ ದೂರದ, ಪಲ್ಲಿತ್ತಟ್ಟು ಮನ್ನಂಕಂಡಿ ತರವಾಡು ದೈವಸ್ಥಾನದಲ್ಲಿ ಕಟ್ಟಲಾದ ಅಲಕ್ಕುನ್ನು ಚಾಮುಂಡಿ ತೆಯ್ಯಂ ವಾಡಿಕೆಯಂತೆ ಪಶ್ಚಿಮದಲ್ಲಿರುವ ಚುಝಲಿ ಭಗವತಿ ದೇವಸ್ಥಾನ, ಪೊಲ್ಲೊಲಿಡಂ ಮತ್ತು ಒತಯೋತಿಡಂ ತರವಾಡ ದೇವಸ್ಥಾನಗಳಿಗೆ ಭೇಟಿ ನೀಡುವ ಆಚರಣೆಯ ವೇಳೆ ನಾಯಿಗಳ ದಂಡು ದಾಳಿಗೆ ಯತ್ನಿಸಿದೆ.
ಬೆಳಿಗ್ಗೆ, ಪೆರುವಟ್ ಪಚ್ಚಿಲ್ ಆಚರಣೆಯ ಭಾಗವಾಗಿ ತರವಾಡು ದೇವಸ್ಥಾನಗಳಿಗೆ ಭೇಟಿ ನೀಡಲು ತೆಯ್ಯಂ ಕಟ್ಟಲಾಗಿದ್ದ ಸ್ಥಳದಿಂದ ಯಾವುದೇ ಬೆಂಗಾವಲುದಾರರು ಅಥವಾ ವಾದ್ಯೋಪಕರಣಗಳ ವಾದಕರಿಲ್ಲದೆ ತೆಯ್ಯಂ ಒಂಟಿಯಾಗಿತ್ತು.
ಬೀದಿ ನಾಯಿಗಳು ಓಡಿ ಬಂದಾಗ, ತೆಯ್ಯಂ ಜೋರಾಗಿ ನಗುತ್ತಾ ಕೈ ಎತ್ತಿ ಗಂಟೆಯ ಶಬ್ದ ಮಾಡಿತು. ನಾಯಿಗಳು ಓಡುತ್ತಿದ್ದಂತೆ, ತೆಯ್ಯಂ ಪೆರುವಟ್ ತನ್ನ ಪ್ರಯಾಣವನ್ನು ಮುಂದುವರೆಸಿತು. ತ್ರಿಕರಿಪುರ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಆದಿತ್ಯನಾಥ್ (19) ಈ ತೆಯ್ಯಂ ಕಟ್ಟಿದ್ದರು.
ತೆಯ್ಯಂ ವೀಕ್ಷಿಸಲು ರಸ್ತೆಬದಿಯಲ್ಲಿ ನಿಂತಿದ್ದ ಮಾಜಿ ಪಂಚಾಯತಿ ಕಾರ್ಯದರ್ಶಿ ಎ.ವಿ. ಪ್ರಕಾಶನ್ ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

.webp)
.webp)
