ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಸಂದರ್ಭದಲ್ಲಿ ಗಂಭೀರ ದುರ್ನಡತೆ,ಕರ್ತವ್ಯಲೋಪ ಮತ್ತು ಶಾಸನಬದ್ಧ ಅಧಿಕಾರಗಳ ದುರುಪಯೋಗದ ಆರೋಪದಲ್ಲಿ ಚುನಾವಣಾ ಆಯೋಗವು ರಾಜ್ಯದ ಏಳು ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಎಂದು ಸುದ್ದಿಸಂಸ್ಥೆಯು ಸೋಮವಾರ ವರದಿ ಮಾಡಿದೆ.
ಅಮಾನತುಗೊಂಡವರು ರಾಜ್ಯ ಸರಕಾರಿ ನೌಕರರಾಗಿದ್ದು,ಚುನಾವಣಾ ಆಯೋಗಕ್ಕಾಗಿ ಸಹಾಯಕ ನೋಂದಣಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದರು. ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ಪರಿಷ್ಕರಣೆ ಸೇರಿದಂತೆ ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಲು ಅವರನ್ನು ನಿಯೋಜಿಸಿತ್ತು.
ಈ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನು ಆರಂಭಿಸುವಂತೆ ಚುನಾವಣಾ ಆಯೋಗವು ಪ.ಬಂಗಾಳದ ಮುಖ್ಯ ಕಾರ್ಯದರ್ಶಿ ನಂದಿನಿ ಚಕ್ರವರ್ತಿಯವರಿಗೆ ಸೂಚಿಸಿದೆ.

