ಭೋಪಾಲ್: ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಗೆ ಮುಜುಗರ ತರುವ ಹಾಗೂ ಆ ರಾಜ್ಯದ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಎನ್ನಬಹುದಾದ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹವಾಲಾ ಹಣ ವಶಪಡಿಸಿಕೊಂಡ ಕೇಸ್ ಒಂದರಲ್ಲಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಂಕಿತ್ ಸೋನಿ ಅವರ ತಲೆದಂಡವಾಗಿದೆ.
ಏನಿದು ಪ್ರಕರಣ?
ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 46ರಲ್ಲಿ ಮಾರ್ಚ್ 19ರಂದು ಗುಜರಾತ್ನ ವ್ಯಾಪಾರಿಯೊಬ್ಬರಿಗೆ ಸೇರಿದ ಸ್ಕಾರ್ಫಿಯೊ ವಾಹನದಲ್ಲಿ ಸೂಕ್ತ ದಾಖಲೆ ಇಲ್ಲದ ₹1 ಕೋಟಿ ಹಣವನ್ನು ಧರಣವಾಡ್ ಪೊಲೀಸರು ವಶಪಡಿಸಿಕೊಂಡಿದ್ದರು.
ಕಾನೂನು ಪ್ರಕಾರ ಹೀಗೆ ವಶಪಡಿಸಿಕೊಂಡ ಹಣವನ್ನು ಪೊಲೀಸರು ಆದಾಯ ತೆರಿಗೆ ಇಲಾಖೆ ಗಮನಕ್ಕೆ ತರಬೇಕು. ಆದರೆ, ಹೀಗೆ ಮಾಡದೆ ಧರಣವಾಡ್ ಠಾಣೆಯ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕೆಲ ಸಿಬ್ಬಂದಿ ತಮ್ಮ ಎಸ್ಪಿಗಷ್ಟೇ ಗಮನಕ್ಕೆ ತಂದು ಠಾಣೆಯಲ್ಲೇ ಪ್ರಕರಣ ಮುಗಿಸಲು ನೋಡಿದ್ದಾರೆ. ಇದಕ್ಕಾಗಿ ಆರೋಪಿತ ಪೊಲೀಸರು ವ್ಯಾಪಾರಿ ಬಳಿ ₹20 ಲಕ್ಷ ಕಿತ್ತುಕೊಂಡಿದ್ದಾರೆ.
ಮಾರನೇ ದಿನ ಗುಜರಾತ್ನ ವ್ಯಾಪಾರಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಗಮನಕ್ಕೆ ನಡೆದ ಸಂಗತಿಯನ್ನು ಫೋನ್ ಕಾಲ್ನಲ್ಲಿ ತಿಳಿಸಿದ್ದಾರೆ. ಕೂಡಲೇ ಗುಜರಾತ್ನ ಆ ಪೊಲೀಸ್ ಅಧಿಕಾರಿ ಮಧ್ಯಪ್ರದೇಶದ ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಧ್ಯಪ್ರದೇಶ ಸರ್ಕಾರ, ಇಲಾಖಾ ತನಿಖೆಗೆ ಆದೇಶಿಸಿತ್ತು. ಪ್ರಾಥಮಿಕ ವರದಿಗಳ ಪ್ರಕಾರ ₹20 ಲಕ್ಷ ಹಣ ಕಿತ್ತುಕೊಳ್ಳುವ ಸಂಚು ನಡೆದಿದ್ದು ಗುನಾ ಎಸ್ಪಿ ನೇತೃತ್ವದಲ್ಲೇ ಎಂದು ತಿಳಿದು ಬಂದಿದೆ.
ಹೀಗಾಗಿ ನಿನ್ನೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ಗುನಾ ಎಸ್ಪಿ ಐಪಿಎಸ್ ಅಧಿಕಾರಿ ಅಂಕಿತ್ ಸೋನಿ ಅವರನ್ನು ಎಸ್ಪಿ ಹುದ್ದೆಯಿಂದ ಕಿತ್ತು ಹಾಕಿದ್ದಾರೆ. ಅವರನ್ನು ಸಹಾಯಕ ಐಜಿಪಿ ಆಗಿ ಗ್ವಾಲಿಯರ್ಗೆ ಹಿಂಬಡ್ತಿ ನೀಡಲಾಗಿದೆ. ಅಲ್ಲದೇ ಧರಣವಾಡ್ ಠಾಣೆಯ ಒಬ್ಬ ಪಿಎಸ್ಐ, ಒಬ್ಬ ಎಎಸ್ಐ ಹಾಗೂ ಇಬ್ಬರು ಹೆಡ್ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಇದು ಸದ್ಯದ ಕ್ರಮ ಆಗಿದೆ. ಆದರೆ, ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರ ಮೇಲೆ ಕಟ್ಟುನಿಟ್ಟಿನ ಕ್ರಮವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಡಿಸಿ ಸಸ್ಪೆಂಡ್!
ಇನ್ನೊಂದು ಪ್ರಕರಣದಲ್ಲಿ ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯ ಡಿಸಿ ಸ್ವರೋಚಿಸ್ ಸೋಮವಂಶಿ ಅವರನ್ನು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಅಮಾನತು ಮಾಡಿದ್ದಾರೆ.
ಸ್ವರೋಚಿಸ್ ಸೋಮವಂಶಿ ಅವರು ಸಿದ್ಧಿ ಜಿಲ್ಲೆಯ ಜಿಲ್ಲಾ ಸಹಕಾರಿ ಬ್ಯಾಂಕ್ನ ಎಂಡಿ ಜೊತೆ ಸೇರಿ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

