ಒಟ್ಟು 24 ಭಾಷೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದ್ದು, ಅದರಲ್ಲಿ 8 ಕವನ ಸಂಕಲನ, 4 ಕಾದಂಬರಿ, 6 ಸಣ್ಣಕಥಾ ಪುಸ್ತಕಗಳು, 2 ಪ್ರಬಂಧ ಸಂಕಲನ, 1 ಸಾಹಿತ್ಯ ವಿಮರ್ಶೆ ಪುಸ್ತಕ, 1 ಆತ್ಮಚರಿತ್ರೆ ಹಾಗೂ 2 ಜೀವನಚರಿತ್ರೆಗಳು ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಬಾಜನವಾಗಿವೆ.
ತಮಿಳ್ಸೆಲ್ವನ್ ಅವರ ಸಾಹಿತ್ಯ ವಿಮರ್ಶೆ ಕೃತಿ 'ತಮಿಳ್ ಸಿರುಕಥೈಯಿನ್ ತಡಂಗಲ್', ನಂದಿನಿ ಸಿಧಾ ರೆಡ್ಡಿ ಅವರ ಕಾವ್ಯಕೃತಿ 'ಅನಿಮೇಶ್', ಪ್ರಭಾಕರನ್ ಅವರ ಕಾದಂಬರಿ 'ಮಾಯಾಮನುಷ್ಯರ್' ಹಾಗೂ ಅಮರೇಶ್ ನುಗಡೋಣಿ ಅವರ ಸಣ್ಣಕಥೆ 'ದಡೆ ಸೇರಿಸು ತಂದೆ' ಪ್ರಶಸ್ತಿಗೆ ಆಯ್ಕೆಯಾದ ಕೆಲವು ಕೃತಿಗಳು.
ಇಂಗ್ಲೀಷ್ ಲೇಖಕ ಹಾಗೂ ಮಾಜಿ ರಾಯಭಾರಿ ನವತೇಜ್ ಸರ್ನಾ ಅವರ ಕಾದಂಬರಿ 'ಕ್ರಿಮ್ಸನ್ ಸ್ಪ್ರಿಂಗ್' ಹಾಗೂ ಹಿಂದಿ ಲೇಖಕಿ ಮಮ್ತಾ ಕಾಲಿಯಾ ಅವರ 'ಜೀತೇ ಜೀತ್ ಅಲಹಾಬಾದ್' ಸ್ಮರಣ ಸಂಪುಟ ಕೂಡ ಈ ಬಾರಿಯ ಪ್ರಶಸ್ತಿಗೆ ಬಾಜನವಾಗಿದೆ.
ಮಾರ್ಚ್ 31ರಂದು ಈ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ನೀಡಲಾಗುವುದು. ಈ ವೇಳೆ ತಾಮ್ರ ಫಲಕ, ಶಾಲು ಹಾಗೂ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಮಾಹಿತಿ ತಿಳಿಸಿದೆ.

