ನವದೆಹಲಿ: ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಭಾಗಶಃ ನಿರ್ಬಂಧಿಸಿರುವ ಹೊರ್ಮುಜ್ ಜಲಸಂಧಿಯ ಕಾರ್ಯತಂತ್ರದ ಹಡಗು ಮಾರ್ಗದ ಮೂಲಕ ಸುಮಾರು 28 ಭಾರತೀಯ ಧ್ವಜ ಹೊಂದಿರುವ ವ್ಯಾಪಾರಿ ಹಡಗುಗಳ ಸಂಚಾರಕ್ಕೆ ಅನುಮತಿಗಾಗಿ ಭಾರತವು ಇರಾನ್ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ಇರಾನ್ ವಿದೇಶಾಂಗ ಸಚಿವರೊಂದಿಗೆ ನಡೆಸಿದ ಸಂಭಾಷಣೆಯ ಸಮಯದಲ್ಲಿ ಹಡಗುಗಳ ಸುರಕ್ಷತೆ ಮತ್ತು ಭಾರತದ ಇಂಧನ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಾದ ಚರ್ಚೆ ನಡೆಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ಕಳೆದ ನಾಲ್ಕೈದು ದಿನಗಳಲ್ಲಿ ಇರಾನ್ ಯಾವುದೇ ಭಾರತೀಯ ಧ್ವಜ ಹೊಂದಿರುವ ವಾಣಿಜ್ಯ ಟ್ಯಾಂಕರ್ ಅನ್ನು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿಸಿಲ್ಲ ಎಂದು ತಿಳಿದುಬಂದಿದೆ.
677 ನಾವಿಕರು, ಭಾರತೀಯ ಧ್ವಜ ಹೊಂದಿರುವ ಒಟ್ಟು 24 ಹಡಗುಗಳು ಪ್ರಸ್ತುತ ಹೊರ್ಮುಜ್ ಜಲಸಂಧಿಯ ಪಶ್ಚಿಮ ದಿಕ್ಕಿನಲ್ಲಿ ನಿಂತಿವೆ. ಆದರೆ, 101 ನಾವಿಕರನ್ನು ಹೊಂದಿರುವ ನಾಲ್ಕು ಹಡಗುಗಳು ಕಾರ್ಯತಂತ್ರದ ಜಲಮಾರ್ಗದ ಪೂರ್ವಕ್ಕೆ ನಿಂತಿವೆ ಎಂದು ಹಡಗು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವರು ಈ ಸಂಬಂಧ ಮೂರು ಬಾರಿ ಮಾತುಕತೆ ನಡೆಸಿದ್ದು, ಹಿಂದಿನ ಮಾತುಕತೆ ವೇಳೆ ಭಾರತೀಯ ಹಡಗುಗಳ ಸುರಕ್ಷತೆ ಮತ್ತು ಭಾರತದ ಇಂಧನ ಭದ್ರತೆ ಬಗ್ಗೆ ಚರ್ಚಿಸಲಾಗಿದೆ' ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಇರಾನ್ ಹೊರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದ ನಂತರ ಜಾಗತಿಕ ತೈಲ ಮತ್ತು ಅನಿಲ ಸರಬರಾಜಿಗೆ ತೊಡಕಾಗಿದ್ದು, ಬೆಲೆ ಏರುಗತಿಯಲ್ಲಿದೆ. ಈ ಮಾರ್ಗದ ಮೂಲಕ ಶೇ 20ರಷ್ಟು ತೈಲ ಸರಬರಾಜಾಗುತ್ತದೆ
ಭಾರತದ ಧ್ವಜವಿದ್ದ ಎರಡು ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ ನೀಡಿತೇ ಎಂಬ ಪ್ರಶ್ನೆಗೆ, ಆಬಗ್ಗೆ ಹಡುಗು ಸಚಿವಾಲಯ ಉತ್ತರಿಸಲಿದೆ ಎಂದಷ್ಟೇ ಜೈಸ್ವಾಲ್ ಹೇಳಿದ್ದಾರೆ.

